
ಶ್ರೀಮಂಡಲ್(ಜನವಾಡ): ಬೀದರ್ ತಾಲ್ಲೂಕಿನ ಶ್ರೀಮಂಡಲ್ ಗ್ರಾಮ ಪಂಚಾಯಿತಿಗೆ ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರದಾನ ಮಾಡಿದರು.
ಶ್ರೀಮಂಡಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಗುಣಶೆಟ್ಟೆ ಹಾಗೂ ಅಭಿವೃದ್ಧಿ ಅಧಿಕಾರಿ ಶರತಕುಮಾರ ಅಭಿಮಾನ್ ಪುರಸ್ಕಾರ ಸ್ವೀಕರಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯಿಂದ ಕೊಡಲಾಗುವ ಪುರಸ್ಕಾರವು ₹ 5 ಲಕ್ಷ, ಫಲಕ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ನರೇಗಾ ಪರಿಣಾಮಕಾರಿ ಅನುಷ್ಠಾನ, ಕೂಸಿನ ಮನೆ, ಡಿಜಿಟಲ್ ಗ್ರಂಥಾಲಯ ನಿರ್ವಹಣೆ, ತೆರಿಗೆ ಸಂಗ್ರಹ, ನೀರು, ಆರೋಗ್ಯ, ನೈರ್ಮಲ್ಯ, ಮಹಿಳಾ ಸಬಲೀಕರಣ ಹಾಗೂ ಮೂಲಸೌಕರ್ಯ ಕಾರ್ಯಗಳಿಗಾಗಿ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಒಲಿದು ಬಂದಿದೆ.
ಪುರಸ್ಕಾರದ ಹಣವನ್ನು ಕುಡಿಯುವ ನೀರಿನ ಯೋಜನೆ ವಿಸ್ತರಣೆ, ಸಮುದಾಯ ಶೌಚಾಲಯ ಹಾಗೂ ಇತರ ಕಾರ್ಯಗಳಿಗೆ ಬಳಸಲಾಗುವುದು ಎಂದು ಶರತಕುಮಾರ ಅಭಿಮಾನ್ ತಿಳಿಸಿದರು.
ಮಂಡ್ಯ ಪ್ರತಿನಿಧಿಗಳ ಭೇಟಿ: ಶ್ರೀಮಂಡಲ್ ಗ್ರಾಮ ಪಂಚಾಯಿತಿಗೆ ಮಂಡ್ಯ ಜಿಲ್ಲೆಯ ಭಾರತಿನಗರ, ಹಲಗೂರು, ಹಕ್ಕೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿಗಳು ಈಚೆಗೆ ಭೇಟಿ ನೀಡಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಮಂಡ್ಯ ಜಿಲ್ಲೆಯ ಪ್ರತಿನಿಧಿಗಳಿಗೆ ಸಂವಿಧಾನ ಪೀಠಿಕೆ ನೀಡಿ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.