ಹುಮನಾಬಾದ್: ಹುಲಸೂರ ತಾಲ್ಲೂಕಿಗೆ ಘಾಟಬೋರಾಳ ಗ್ರಾಮ ಪಂಚಾಯಿತಿ ಬಿಟ್ಟುಕೂಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟುಹಿಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ತಹಶೀಲ್ದಾರ್ ಡಾ.ಪ್ರದೀಪಕುಮಾರ ಹಿರೇಮಠ ಅವರು ತಾಲ್ಲೂಕಿನ ಘಾಟಬೋರಾಳ ಗ್ರಾಮದಲ್ಲಿ ಶುಕ್ರವಾರ ಸಭೆ ನಡೆಸಿದರು.
ಗ್ರಾಮದ ಪ್ರಮುಖರು ಮಾತನಾಡಿ, ‘ಹುಲಸೂರ ತಾಲ್ಲೂಕಿಗೆ ಯಾವುದೇ ಕಾರಣಕ್ಕೂ ಘಾಟಬೋರಾಳ ಗ್ರಾಮ ಪಂಚಾಯಿತಿ ಬಿಟ್ಟುಕೂಡುವುದಿಲ್ಲ. ಒಂದು ವೇಳೆ ರಾಜ್ಯ ಸರ್ಕಾರ ನೂತನ ತಾಲ್ಲೂಕು ಘೋಷಣೆ ಮಾಡಬೇಕಾದರೆ ಘಾಟಬೋರಾಳ ಮಾಡಲಿ ಅಥವಾ ಹುಮನಾಬಾದ್ ತಾಲ್ಲೂಕಿನಲ್ಲಿಯೇ ಮುಂದುವರಿಸಬೇಕು. ಈ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂಬರುವ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಿ ಬೃಹತ್ ಪ್ರತಿಭಟನೆ ನಡೆಸಲಾಗುವುದು’ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಾರ್ಥ ಮಾತನಾಡಿ, ‘ಈಗಾಗಲೇ ಸಂಸದ, ಶಾಸಕರಿಗೆ ಮನವಿಪತ್ರ ನೀಡಲಾಗಿದೆ. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೂ ಸಹ ಮನವಿಪತ್ರ ಸಲ್ಲಿಸಲಾಗಿದೆ. ಯಾವುದೇ ಸ್ಪಂದನೆ ಸಿಗದಿದ್ದಲ್ಲಿ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರು ಚಲೋ ಹೋರಾಟ ನಡೆಸ ಬೇಕಾಗುತ್ತದೆ’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಾ.ಪ್ರಕಾಶ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಅಭಿಜೀತ್ ಪಾಟೀಲ, ತಾಲ್ಲೂಕು ಪಂಚಾಯಿತಿ ಇಒ ಮುರುಗೆಪ್ಪ ವಸ್ತ್ರದ್, ಸಿಪಿಐ ಶರಣಬಸಪ್ಪ ಕೋಡ್ಲಾ, ಪಿಎಸ್ಐ ಮಂಜನಗೌಡ ಪಾಟೀಲ, ಜ್ಞಾನೇಶ್ವರ ಭೋಸ್ಲೆ, ರಂಜೀತ ಮಾನಕರೆ, ರಾಜಕುಮಾರ ಪಾಟೀಲ, ಶಿವಾಜಿ ರಘು, ಸಾಯಿಕುಮಾರ ಹಡಗೆ, ಅಭಿಮನ್ಯು ನಿರಗುಡೆ, ವಿಷ್ಣು ಜಮಾದಾರ, ಗೋರಖ ಸಾಗರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.