ಬೀದರ್: ಪಾಲಕರು ಬೆಳವಣಿಗೆ ಹಂತದಲ್ಲಿಯೇ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ, ಜೀವನ ಮೌಲ್ಯಗಳ ಬಗ್ಗೆ ತಿಳಿವಳಿಕೆ ಕೊಡಿಸಬೇಕು ಎಂದು ಎಫ್ಪಿಎಐ ಕೇಂದ್ರ ಕಚೇರಿಯ ಮಾಜಿ ಉಪಾಧ್ಯಕ್ಷೆ ಜಿ. ಪೂರ್ಣಿಮಾ ಹೇಳಿದರು.
ನಗರದ ಭಾರತೀಯ ಕುಟುಂಬ ಯೋಜನಾ ಸಂಸ್ಥೆಯ(ಎಫ್ಪಿಎಐ) ಬೀದರ್ ಶಾಖೆಯಲ್ಲಿ ಏರ್ಪಡಿಸಿದ್ದ ಹದಿ ಹರೆಯದವರ ಆರೋಗ್ಯ ಶಿಕ್ಷಣ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವಜನತೆ ಅಂತರ್ಜಾಲದ ವ್ಯಾಮೋಹಕ್ಕೆ ಒಳಗಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪೋಷಕರು ಮಕ್ಕಳಿಗೆ ನೈತಿಕ ಶಿಕ್ಷಣ ನೀಡಬೇಕು. ತಮ್ಮ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸಿದರೆ ಭವಿಷ್ಯದಲ್ಲಿ ಅನಾಹುತಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷ ಡಾ.ನಾಗೇಶ ಪಾಟೀಲ ಮಾತನಾಡಿ, ಯುವ ಜನಾಂಗ ತಮ್ಮ ಹದಿಹರೆಯದಲ್ಲಿ ಜೀವನ ಕೌಶಲ ಅರಿತುಕೊಳ್ಳಬೇಕು. ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಫ್ಪಿಎಐ ಮುಂಬೈನ ಕೇಂದ್ರ ಕಚೇರಿಯ ಖಜಾಂಚಿ ಡಾ. ರತಿ ರಘು ಮಾತನಾಡಿ, ಪ್ರೌಢಾವಸ್ಥೆಗೆ ಬರುವ ಹಂತದಲ್ಲೇ ಜೀವನದ ಮೌಲ್ಯಗಳನ್ನು ಅರಿಯಬೇಕು ಎಂದು ತಿಳಿಸಿದರು.
ನಿವೃತ್ತ ಉಪನ್ಯಾಸಕ ಟಿ.ಜೆ. ಹಾದಿಮನಿ, ಡಾ.ಸುಭಾಷ ಬಶೆಟ್ಟಿ ಹಾಗೂ ಎಫ್ಪಿಎಐ ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ಮಾತನಾಡಿದರು.
ಕಾರ್ಯಕ್ರಮ ಅಧಿಕಾರಿ ವಿಜಯಲಕ್ಷ್ಮಿ ಹುಡುಗೆ ನಿರೂಪಣೆ ಮಾಡಿದರು. ಸಂಖ್ಯಾಧಿಕಾರಿ ವಿನಾಯಕ ಕುಲಕರ್ಣಿ ಸ್ವಾಗತಿಸಿದರು. ಕಾಲೇಜುಗಳ 40 ಯುವತಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.