ಬೀದರ್: ಮನುಷ್ಯನಿಗೆ ಸರ್ವ ಧನಕ್ಕಿಂತಲೂ ಸಂತೋಷ ಮಿಗಿಲಾದದ್ದು. ಸಂತೋಷ ಹೊರಗಿಲ್ಲ. ಕಾರಣ, ಹೊರಗೆ ಹುಡುಕಿದರೆ ಸಿಗದು. ಹೊರಗೆ ಹುಡುಕುವವರಿಗೆ ಮತ್ತಷ್ಟು ದುಃಖವೇ ಉಂಟಾಗುವುದು. ಕುಡುಕ ಸಾಲದ ಚಿಂತೆ ಮರೆಯಲು ಹೆರವರಲ್ಲಿ ಹಣ ತಂದು ಮತ್ತೆ ಕುಡಿದರೆ ಸಾಲ ತೀರದೆ ಹೆಚ್ಚಾಗುವಂತೆ ಆಗುವುದು ಹೊರಗೆ ಸುಖ ಹುಡುಕುವವರ ಗತಿ.
ಸುಖ ಬಯಸುವವರು ತಮ್ಮ ಜೀವನದಲ್ಲಿ ಈ ಮೂರರ ಬಗ್ಗೆ ಸದಾ ಸಂತೋಷಿತರಾಗಿರಬೇಕು. ಹೊನ್ನಿನಲ್ಲಿ ಮತ್ತು ಊಟದಲ್ಲಿ ಬಂದ, ದೊರೆತ ಅಥವಾ ಮದುವೆಯಾದ ಹೆಣ್ಣಿನಲ್ಲಿ ಸುಖ ಪಡದೆ ಮತ್ತೊಂದು ಬಯಸುತ್ತ ಹೋದರೆ ಪಾಪ ಹಾಗೂ ಅನ್ಯರ ಕೋಪಕ್ಕೆ ಗುರಿಯಾಗುವುದು ತಪ್ಪದು. ಅದರಂತೆ ನಾಲಿಗೆ ರುಚಿಗೆ ಹಾಗೆಯೇ ಊಟ ಮಾಡುತ್ತ ಹೋದರೆ ಹೊಟ್ಟೆಯ ಗತಿ ಏನು? ತನ್ನ ತಾಟಿನಲ್ಲಿ ಬಂದು ನೀಡಿದ್ದನ್ನು ಸಂತೋಷದಿಂದ ಸವಿಯಬೇಕು. ತಾನು ಊಟ ಮಾಡುವಾಗ ಅನ್ಯರ ಎಡೆಯ ಕಡೆಗೆ ಲಕ್ಷ್ಯ ಇರಬಾರದು.
ಅನ್ಯರ ಕಡೆ ಲಕ್ಷ್ಯವಿಟ್ಟು ಮಾಡಿದ ಊಟ ರುಚಿಸದು. ಪಚನವೂ ಆಗಲಾರದು. ಧನ ಗಳಿಸುವಲ್ಲಿಯೂ ಅನ್ಯರ ಕಡೆ ನೋಡದೆ, ತನಗೆ ದೇವರು ಉಂಡು, ಉಡಲು ಕೊಟ್ಟಿದ್ದಾನಲ್ಲವೆಂದು ಸಂತೋಷಿಸಬೇಕು. ಗಳಿಕೆಗೆ ಇತಿ ಮಿತಿಗಳಿಲ್ಲ. ಕಬೀರರು ದೇವರಲ್ಲಿ ಎಷ್ಟು ಧನ ಬೇಡಿದ್ದಾರೆ ಕೇಳಿ ಇಲ್ಲಿ.
"ಸಾಯಿ ಇತನಾ ದೀಜಿಯೇ ಜಾಮೇ ಕುಟುಂಬ ಸಮಾಯ!
ಮೈ ಭೀ ಭೂಕಾ ನ ರಂಹು ಸಾಧು ಭೂಖಾ ನ ಜಾಯ!!"
ನಾನು, ನನ್ನವರು ಮತ್ತು ಅತಿಥಿಯಾಗಿ ಬಂದವರು ಉಪವಾಸವಿರದಂತೆ ಕೊಡು ಸಾಕು ಎಂದಿದ್ದಾರೆ. ಆದ್ದರಿಂದ ಕಾಂಚಣ, ಕಾಮಿನಿ ಹಾಗೂ ಭೋಜನಗಳಲ್ಲಿ ತೃಪ್ತಿ ಬೇಗ ತಾಳುವುದು, ತನು ಮನಗಳಿಗೆ ಹಿತದಾಯಕವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.