ಭಾಲ್ಕಿ: ‘ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಉಮಾದೇವಿ ಪ್ರಕಾಶ ಖಂಡ್ರೆ ಫೌಂಡೇಶನ್ ವತಿಯಿಂದ ಇಲ್ಲಿಯ ಶ್ರೀಗುರು ಪ್ರಸನ್ನ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿರುವ ಹರ್ ಘರ್ ತಿರಂಗ ಅಭಿಯಾನಕ್ಕೆ ಎರಡು ದಿನಗಳಲ್ಲಿ 25 ಸಾವಿರ ರಾಷ್ಟ್ರಧ್ವಜ ವಿತರಿಸಲಾಗುವುದು’ ಎಂದು ಯುವ ಮುಖಂಡ ಪ್ರಸನ್ನ ಖಂಡ್ರೆ ತಿಳಿಸಿದರು.
ವಿದ್ಯಾರ್ಥಿಗಳಿಗೆ ರಾಷ್ಟ್ರಧ್ವಜ ವಿತರಿಸಿ ಅವರು ಮಾತನಾಡಿ,‘ದೇಶಕ್ಕಾಗಿ ಹಲವು ಮಹನೀಯರು ಶ್ರಮಿಸಿದ್ದಾರೆ. ಯುವಜನತೆ ಸ್ವಾತಂತ್ರ್ಯದ ಪರಿಕಲ್ಪನೆ ಅರಿತು ದೇಶದ ಪ್ರಗತಿ ಹಾಗೂ ಏಳಿಗೆಗೆ ಕೊಡುಗೆ ನೀಡಬೇಕು.
ಇದು ನಮ್ಮೆಲ್ಲರ ಆದ್ಯ ಕರ್ತವ್ಯ. ಪ್ರತಿಯೊಬ್ಬರಲ್ಲೂ ದೇಶಾಭಿಮಾನದ ಕಿಚ್ಚು ಹೆಚ್ಚಾಗಬೇಕು. ಎಲ್ಲರೂ ಭ್ರಷ್ಟಾಚಾರ, ಅನ್ಯಾಯ, ಅಸಮಾನತೆ, ಅನೀತಿಯ ವಿರುದ್ಧ ಹೋರಾಟ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.ಸಂಸ್ಥೆಯ ಅಧ್ಯಕ್ಷೆ ಉಮಾದೇವಿ ಪ್ರಕಾಶ ಖಂಡ್ರೆ ಮಾತನಾಡಿದರು. ಗೋವಿಂದರಾವ್ ಬಿರಾದಾರ, ಪುರಸಭೆ ಸದಸ್ಯ ಪಾಂಡುರಂಗ ಕನಸೆ, ಧನರಾಜ ಕುಂದೆ, ರಾಜಕುಮಾರ್ ಜಲ್ದೆ, ಸಂತೋಷ ಭೂಸಗುಂಡೆ, ಶಿವಕುಮಾರ ಮೇತ್ರೆ, ದೀಪಕ ಶಿಂಧೆ, ನಾಗೇಶ ತಮಾಸಂಗೆ, ಮಹೇಶ ಮುಚಲಂಬೆ, ಸತೀಶ ಸೂರ್ಯವಂಶಿ ಹಾಗೂ ಜೈರಾಜ ಕೊಳ್ಳಾ ಇದ್ದರು.
‘ಧ್ವಜ ನಿರ್ವಹಣೆ ತಿಳಿವಳಿಕೆ ನೀಡಿ’
ಬೀದರ್: ಹರ್ ಘರ್ ತಿರಂಗ ಅಭಿಯಾನ ವೇಳೆ ಸಾರ್ವಜನಿಕರಿಗೆ ರಾಷ್ಟ್ರ ಧ್ವಜ ನಿರ್ವಹಣೆಯ ತಿಳಿವಳಿಕೆಯನ್ನೂ ನೀಡಬೇಕು ಎಂದು ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಅಂಬರೀಷ್ ಬಟನಾಪುರೆ ಮನವಿ ಮಾಡಿದ್ದಾರೆ.
ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಪ್ರತಿ ಮನೆಗಳ ಮೇಲೂ ರಾಷ್ಟ್ರ ಧ್ವಜ ಹಾರಿಸುವ ಅಭಿಯಾನ ಹಮ್ಮಿಕೊಂಡಿರುವುದು ಸಂತಸದ ಸಂಗತಿ. ಆದರೆ, ಅಭಿಯಾನದ ನಂತರ ರಾಷ್ಟ್ರ ಧ್ವಜಕ್ಕೆ ಅಗೌರವ ಆಗದಂತೆ ನೋಡಿಕೊಳ್ಳುವುದೂ ಎಲ್ಲರ ಜವಾಬ್ದಾರಿಯಾಗಿದೆ. ರಾಷ್ಟ್ರಧ್ವಜವನ್ನು ಎಲ್ಲೆಂದರಲ್ಲಿ ಬೀಸಾಡದೆ, ಗೌರವಪೂರ್ವಕವಾಗಿ ನಿರ್ವಹಿಸುವ ಬಗ್ಗೆ ಅರಿವು ಮೂಡಿಸುವ ಅಗತ್ಯ ಇದೆ ಎಂದು ಹೇಳಿದ್ದಾರೆ.
ಸಂಘ ಸಂಸ್ಥೆಗಳು ಧ್ವಜ ವಿತರಣೆಯ ಸಂದರ್ಭದಲ್ಲಿ ನಿರ್ವಹಣೆಯ ಕುರಿತು ಸಹ ಮಾಹಿತಿ ಕೊಡಬೇಕು ಎಂದಿದ್ದಾರೆ.ಮಾಧ್ಯಮಗಳಲ್ಲಿ ಈ ಕುರಿತು ಸಂದೇಶ ನೀಡಬೇಕು ಎಂದು ಅವರು ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.