ಜನವಾಡ: ‘ಶುಚಿತ್ವದಿಂದ ರಾಸುಗಳ ಆರೋಗ್ಯ ಚೆನ್ನಾಗಿರುತ್ತದೆ. ಶುದ್ಧ ಹಾಲಿನ ಉತ್ಪಾದನೆಗೆ ಕ್ರಮ ಕೈಗೊಳ್ಳದಿದ್ದರೆ ಹೈನು ರಾಸುಗಳು ರೋಗಗಳಿಗೆ ತುತ್ತಾಗುತ್ತವೆ’ ಎಂದು ಪಶು ವೈದ್ಯಾಧಿಕಾರಿ ಡಾ. ದೀಪಕ ಪಾಟೀಲ ಹೇಳಿದರು.
ಬೀದರ್ ತಾಲ್ಲೂಕಿನ ಯರನಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಶುದ್ಧ ಹಾಲು ಉತ್ಪಾದನೆ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕೆಚ್ಚಲು ಬಾವು ರೋಗ ಕೆಲ ಸೂಕ್ಷ್ಮಾಣುಗಳಿಂದ ಆಕಳು ಮತ್ತು ಎಮ್ಮೆಗಳಿಗೆ ಬರುತ್ತದೆ. ಈ ರೋಗದಿಂದ ಹಾಲಿನ ಪ್ರಮಾಣ ಕಡಿಮೆಯಾಗುತ್ತದೆ. ಈ ರೋಗವು ಹಾಲನ್ನು ಹಿಂಡುವ ವ್ಯಕ್ತಿಯ ಕೈಗಳಿಂದ ಹಾಗೂ ಹಾಲು ಹಿಂಡುವ ಯಂತ್ರದಿಂದ ಹರಡುತ್ತದೆ. ಮೊಲೆ ಹಾಗೂ ಮೊಲೆ ತೊಟ್ಟಿನ ಮೇಲೆ ಗಾಯಗಳಾದಾಗ ವಿಷ ಕ್ರಿಮಿಗಳು ಒಳ ಸೇರಿ ಕೆಚ್ಚಲು ಬಾವನ್ನುಂಟು ಮಾಡುತ್ತವೆ’ ಎಂದು ತಿಳಿಸಿದರು.
‘ದನಗಳ ಮತ್ತು ಕೊಟ್ಟಿಗೆಯ ಸ್ವಚ್ಛತೆ ಕಾಪಾಡದಿದ್ದರೆ ಈ ರೋಗವು ಹರಡುತ್ತದೆ. ಈ ನಿಟ್ಟಿನಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರು ಶುದ್ಧ ಹಾಲು ಉತ್ಪಾದನೆಗೆ ಒತ್ತುಕೊಡಬೇಕು’ ಎಂದು ಹೇಳಿದರು.
‘ಕೆಚ್ಚಲು ಬಾವು ರೋಗದಲ್ಲಿ ಕೆಚ್ಚಲು ಊದು ಕೊಂಡು ಹಸುವಿಗೆ ನೋವಾಗುತ್ತದೆ. ಕೆಚ್ಚಲಿನಿಂದ ಹಾಲು ಕರೆದಾಗ ಹಾಲಿನಲ್ಲಿ ರಕ್ತದ ಕಣಗಳು, ಸಣ್ಣ ಗಡೆಗಳು ಹಾಗೂ ಕೆಟ್ಟಂತಾಗಿರುವುದು ಕಂಡು ಬರುತ್ತದೆ. ಕೆಲವೊಂದು ಸಲ ಈ ಹಾಲು ನೀರಿನಂತೆ ಅಥವಾ ಮೊಸರಿನಂತೆಯೂ ಇರಬಹುದು. ಕೆಲವು ಆಕಳುಗಳಲ್ಲಿ ವಿಪರೀತ ಜ್ವರ ಕಾಣಿಸಿಕೊಂಡು ನೀರು ಮೇವು ಸೇವನೆ ನಿಲ್ಲಿಸುತ್ತವೆ. ಕೆಲವೊಮ್ಮೆ ಸಾಯಲು ಬಹುದು’ ಎಂದು ವಿವರಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಪಶು ವಿಜ್ಞಾನಿ ಅಕ್ಷಯಕುಮಾರ ಮಾತನಾಡಿ, ‘ಹಾಲು ಉತ್ಪಾದನೆಯಲ್ಲಿ ಶುಚಿತ್ವಕ್ಕೆ ಮಹತ್ವದ ಸ್ಥಾನ ನೀಡಬೇಕು’ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬೊಂಪಳ್ಳಿ, ಇಸ್ಲಾಂಪುರ, ಯರನಳ್ಳಿ ಗ್ರಾಮದ 80 ರೈತರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.