ADVERTISEMENT

ನಿರ್ಗತಿಕರ ಸೇವೆಯೇ ನಿಜ ಬಸವತತ್ವ

ಸಾಹಿತ್ಯಚಿಂತನ ಸಮಾವೇಶದಲ್ಲಿ ಭಾಲ್ಕಿಶ್ರೀ ಮನದಾಳದ ಮಾತು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 16:30 IST
Last Updated 8 ನವೆಂಬರ್ 2019, 16:30 IST
ಬಸವಕಲ್ಯಾಣದಲ್ಲಿ ಶುಕ್ರವಾರ ಹಾರಕೂಡ ಡಾ.ಚನ್ನವೀರ ಶಿವಾಚಾರ್ಯರ 57 ನೇ ಜನ್ಮದಿನದ ಅಂಗವಾಗಿ ನಡೆದ ಸಾಹಿತ್ಯ ಚಿಂತನಗೋಷ್ಠಿಯನ್ನು ಶಾಸಕ ಬಿ.ನಾರಾಯಣರಾವ್ ದೀಪ ಉದ್ಘಾಟಿಸಿದರು
ಬಸವಕಲ್ಯಾಣದಲ್ಲಿ ಶುಕ್ರವಾರ ಹಾರಕೂಡ ಡಾ.ಚನ್ನವೀರ ಶಿವಾಚಾರ್ಯರ 57 ನೇ ಜನ್ಮದಿನದ ಅಂಗವಾಗಿ ನಡೆದ ಸಾಹಿತ್ಯ ಚಿಂತನಗೋಷ್ಠಿಯನ್ನು ಶಾಸಕ ಬಿ.ನಾರಾಯಣರಾವ್ ದೀಪ ಉದ್ಘಾಟಿಸಿದರು   

ಬಸವಕಲ್ಯಾಣ: `ಲಿಂಗಕ್ಕೆ ಕೋಟಿ ಬಿಲ್ವಾರ್ಚನೆ ನಡೆಸಿ ಅಪಾರ ಪ್ರಮಾಣದ ನೀರು ಪೋಲು ಮಾಡುವುದಕ್ಕಿಂತ ನಿರ್ಗತಿಕರಿಗೆ ಸಹಾಯ ಮಾಡುವುದು, ಬಾಯಾರಿ ಬಂದವರಿಗೆ ನೀರು ಕೊಡುವುದೇ ನಿಜವಾದ ಬಸವತತ್ವ' ಎಂದು ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಇಲ್ಲಿನ ತೇರು ಮೈದಾನದಲ್ಲಿನ ಸಭಾಭವನದಲ್ಲಿ ಶುಕ್ರವಾರ ಹಾರಕೂಡ ಡಾ.ಚನ್ನವೀರ ಶಿವಾಚಾರ್ಯರ 57 ನೇ ಜನ್ಮದಿನದ ಅಂಗವಾಗಿ ಅಯೋಜಿಸಿದ್ದ ಸಾಹಿತ್ಯ ಚಿಂತನ ಸಮಾವೇಶದಲ್ಲಿ ಅವರು ಮಾತನಾಡಿದರು.

`ಬಸವಣ್ಣನವರು ವಚನ ಸಾಹಿತ್ಯ ರಚಿಸಿ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಯತ್ನಿಸಿದರು. ಕಾಯಕ, ದಾಸೋಹಕ್ಕೆ ಮಹತ್ವ ನೀಡಿದರು. ದಯವೇ ಧರ್ಮದ ಮೂಲ ಎಂದು ಸಾರಿದರು. ಹಾರಕೂಡ ಚನ್ನವೀರ ಶಿವಾಚಾರ್ಯರು ಕೂಡ ಅದೇ ತತ್ವದ ಪಾಲನೆ ಮಾಡುತ್ತಿದ್ದಾರೆ. ಸಹಾಯ ಬೇಡಿ ಬಂದವರಿಗೆ ಅವರ ಜಾತಿ, ಧರ್ಮ ಎಣಿಸದೆ ನೆರವು ನೀಡುತ್ತಾರೆ' ಎಂದರು.

ADVERTISEMENT

ಹಿರಿಯ ಸಾಹಿತಿ ಡಾ.ಸಂಗಮೇಶ ಸವದತ್ತಿಮಠ ಮಾತನಾಡಿ, `ಬಸವಾದಿ ಶರಣರ ವಚನಗಳ ಸಂಪಾದನೆ ಹಾಗೂ ಪ್ರಕಟಣೆಗೆ ಹಾರಕೂಡ ಸ್ವಾಮೀಜಿ ಸಹಕಾರ ನೀಡಿದ್ದಾರೆ. ಮಠದಿಂದ 14 ವಿಷಯ ವಚನ ಸಂಪುಟಗಳನ್ನು ಹಾಗೂ ಒಂದು ವಿಷಯ ವಿವರಣ ಸಂಪುಟ ಪ್ರಕಟಣೆಗೆ ಲಕ್ಷಾಂತರ ರೂಪಾಯಿ ವ್ಯಯಿಸಿದ್ದಾರೆ. ಇಂಥ ಕಾರ್ಯ ಈ ಭಾಗದಲ್ಲಿನ ಯಾವುದೇ ಮಠ ಕೈಗೊಂಡಿಲ್ಲ' ಎಂದು ಅಭಿಪ್ರಾಯಪಟ್ಟರು.

`ಚನ್ನವೀರ ಶಿವಾಚಾರ್ಯರು ಯಾವುದೇ ಜಾತಿಗೆ ಸೀಮಿತರಾಗಿಲ್ಲ. ಇವರು ಆಚಾರ್ಯ ಹಾಗೂ ಬಸವ ಪರಂಪರೆಯ ಪರಿಚಾರಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಷಷ್ಠ್ಯಬ್ದಿ ಕಾರ್ಯಕ್ರಮ ಅದ್ಧೂರಿಯಾಗಿ ಆಚರಿಸಬೇಕಾಗಿದ್ದು, 60 ಗ್ರಂಥಗಳ ಪ್ರಕಟಣೆಗೆ ಪ್ರಯತ್ನಿಸಲಾಗುವುದು' ಎಂದು ಹೇಳಿದರು.

ತಹಶೀಲ್ದಾರ್ ಸಾವಿತ್ರಿ ಶರಣು ಸಲಗರ, ಉಪನ್ಯಾಸಕಿ ಶ್ರೀದೇವಿ ಖಂಡಾಳೆ ಮಾತನಾಡಿದರು.

ಸಾಹಿತಿ ಡಾ.ಗವಿಸಿದ್ದಪ್ಪ ಪಾಟೀಲ, ರಮೇಶ ರಾಜೋಳೆ, ಹಿರೇನಾಗಾಂವ ಜಯಶಾಂತಲಿಂಗ ಸ್ವಾಮೀಜಿ, ಡಾ.ಸುಶೀಲಾದೇವಿ ಹೊಳಕುಂದೆ, ಪ್ರೊ.ರುದ್ರೇಶ್ವರ ಸ್ವಾಮಿ ಗೋರಟಾ, ನವಲಿಂಗಕುಮಾರ ಪಾಟೀಲ, ಶರಣು ಪವಾಡಶೆಟ್ಟಿ ಮಾತನಾಡಿದರು.

ಪ್ರೊ.ಸರಸ್ವತಿ ಪಾಟೀಲ ಕೊಹಿನೂರ ಸಂಪಾದಿಸಿದ `ಚನ್ನಸಂಭ್ರಮ-57' ಗ್ರಂಥ ಬಿಡುಗಡೆ ಮಾಡಲಾಯಿತು.

ಶಾಸಕರಾದ ಬಿ.ನಾರಾಯಣರಾವ್, ಬಸವರಾಜ ಮತ್ತಿಮೂಡ, ಭಾಲ್ಕಿ ಗುರುಬಸವ ಪಟ್ಟದ್ದೇವರು, ಕಿಟ್ಟಾ ಸಿದ್ಧಲಿಂಗ ಸ್ವಾಮೀಜಿ, ಹಿರಿಯ ಮುಖಂಡ ಬಾಬು ಹೊನ್ನಾನಾಯಕ, ಸುನಿಲ ಪಾಟೀಲ, ಪ್ರದೀಪ ವಾತಡೆ, ನೀಲಕಂಠ ರಾಠೋಡ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಆನಂದ ಪಾಟೀಲ, ಗುಂಡುರೆಡ್ಡಿ, ಅಣ್ಣಾರಾವ್ ರಾಠೋಡ, ಜಗನ್ನಾಥ ಪಾಟೀಲ ಮಂಠಾಳ, ಶಿವರಾಜ ನರಶೆಟ್ಟಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಯಶೋದಾ ರಾಠೋಡ, ಶಾಲಿನಿ ವಾಡಿಕರ, ಚಂದ್ರಕಾಂತಸ್ವಾಮಿ ನಾರಾಯಣಪುರ, ಸೂರ್ಯಕಾಂತ ಮಠ, ಡಾ.ಬಸವರಾಜಸ್ವಾಮಿ ತ್ರಿಪುರಾಂತ, ಸಿದ್ರಾಮ ಕವಳೆ, ಶರಣು ಆಲಗೂಡ, ಮನೋಜ ಮಾಶೆಟ್ಟೆ, ದಾವೂದ್ ಮಂಠಾಳ ಉಪಸ್ಥಿತರಿದ್ದರು. ಕುವೆಂಪು ಶಾಲೆಯ ಮಕ್ಕಳು ನೃತ್ಯ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.