ಬೀದರ್: ಶಿಕ್ಷಣದಿಂದ ಮಾತ್ರ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕ ಕಿಶೋರಬಾಬು ಹೇಳಿದರು.
ಇಲ್ಲಿಯ ನೌಬಾದ್ನ ಜೈ ಭೀಮನಗರದಲ್ಲಿ ನಡೆದ ಕಾರ್ಮಿಕರ ಮಕ್ಕಳ ಎರಡು ತಿಂಗಳ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಈಗ ಕಾಲ ಬದಲಾಗಿದೆ. ಶಿಕ್ಷಣ ಸೌಲಭ್ಯ ಎಲ್ಲೆಡೆಯೂ ಇದೆ. ಕಾರಣ, ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು ಎಂದು ತಿಳಿಸಿದರು.
ಬರುವ ದಿನಗಳಲ್ಲಿ ಹೋಬಳಿ, ಗ್ರಾಮ ಮಟ್ಟದಲ್ಲೂ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಬಿರಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಕಲ್ಯಾಣ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಹಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೂರ್ಯಕಾಂತ ಸಾಧುರೆ ಹೇಳಿದರು.
ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ಕಾರ್ಮಿಕರ ಮಕ್ಕಳಿಗೆ ಎರಡು ತಿಂಗಳು ಸ್ಪೊಕನ್ ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ, ವಿವಿಧ ಆಟೋಟಗಳ ತರಬೇತಿಗಳನ್ನು ನೀಡಲಾಗಿದೆ. ಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಪ್ರಾಶಸ್ತ್ಯ ನೀಡಬೇಕು ಎಂದು ತಿಳಿಸಿದರು.
ಶಿಕ್ಷಕರಾದ ಶಿವರುದ್ರ ಕಾಂಬಳೆ, ಪ್ರಶಾಂತ ಶ್ರೀಮಾಳೆ, ಭೀಮರಾವ್ ಮಾಲಗತ್ತಿ, ರಾಜಶೇಖರ ಬೆಳ್ಳೆ, ಶಾರದಾ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಭಾರತೀಯ ವಿದ್ಯಾರ್ಥಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್ ನಾಟೇಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಣದೂರಿನ ಭಂತೆ ಜ್ಞಾನಸಾಗರ ಸಾನಿಧ್ಯ ವಹಿಸಿದ್ದರು. ನಗರಸಭೆ ಆಯುಕ್ತ ಪ್ರಬುದ್ಧ ಕಾಂಬಳೆ, ಮುಖಂಡರಾದ ರಮೇಶ ಡಾಕುಳಗಿ, ವಿನೋದ ಅಪ್ಪೆ, ಲಕ್ಷ್ಮಣರಾವ್ ಕಾಂಬಳೆ, ಶಂಕರರಾವ್ ಸಿಂಧೆ, ಪಾರ್ವತಮ್ಮ ಹೊಸಮನಿ, ಪ್ರಕಾಶ ಸೂರ್ಯವಂಶಿ, ಶರಣಪ್ಪ ಚತುರೆ, ಸಂತೋಷ ಕೆ. ಸಿಂಧೆ, ಝರೆಮ್ಮ ಕಾಂಬಳೆ, ಸತ್ಯಮ್ಮ ಸಂಪಿಗೆ, ಕಮಳಮ್ಮ ಲಕ್ಷ್ಮಣರಾವ್, ಯಶೋಧರಾ ವಾಲ್ದೊಡ್ಡಿಕರ್, ಘಾಳೆಮ್ಮ ಲಕೇರಿ, ರಂಗಮ್ಮ ಚಾಂಬೋಳಕರ್ ಇದ್ದರು.
ಕಲ್ಯಾಣ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಹಾ ಸಂಘದ ವತಿಯಿಂದ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.