ADVERTISEMENT

ದುರುದ್ದೇಶದಿಂದ ಡಿಸಿಸಿ ಬ್ಯಾಂಕ್ ಮೇಲೆ ಐ.ಟಿ. ದಾಳಿ-ಸಚಿವ ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2024, 14:07 IST
Last Updated 12 ಏಪ್ರಿಲ್ 2024, 14:07 IST
<div class="paragraphs"><p>ಸಚಿವ ಈಶ್ವರ ಬಿ. ಖಂಡ್ರೆ</p></div>

ಸಚಿವ ಈಶ್ವರ ಬಿ. ಖಂಡ್ರೆ

   

ಬಸವಕಲ್ಯಾಣ: 'ದುರುದ್ದೇಶದಿಂದ ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಡಿಸಿಸಿ) ಮೇಲೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆಸಲಾಗಿದೆ. ಅಲ್ಲಿ ಯಾವುದೇ ಹಣಕಾಸಿನ ವ್ಯವಹಾರವೇ ನಡೆದಿಲ್ಲ' ಎಂದು ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ಐ.ಟಿ ದಾಳಿ ಕುರಿತು ಪತ್ರಕರ್ತರು ನಗರದಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದಾಗ, ಡಿಸಿಸಿ ಬ್ಯಾಂಕಿನ ಮೇಲೆ ದಾಳಿ ನಡೆಸಿದ್ದರಿಂದ ರೈತರು, ಕೃಷಿಕರ ಹಣಕಾಸಿನ ವಹಿವಾಟು, ಹಣ ಪಾವತಿಗೆ ಸಮಸ್ಯೆ ಆಗಲಿದೆ. ಸುಮಾರು ಮೂರು ಲಕ್ಷ ರೈತರಿಗೆ ಇದರಿಂದ ತೊಂದರೆ ಆಗಲಿದೆ ಎಂದರು.

ADVERTISEMENT

ಇಡಿ, ಸಿಬಿಐ, ಐ.ಟಿ ಸೇರಿದಂತೆ ಎಲ್ಲ ಸ್ವಾಯತ್ತ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ನಮ್ಮ ಪಕ್ಷದ ಮುಖಂಡರು ಹೇಳುತ್ತಲೇ ಬಂದಿದ್ದಾರೆ. ಅದರಲ್ಲೂ ಲೋಕಸಭೆಗೆ ಚುನಾವಣೆ ಘೋಷಣೆಯಾದ ನಂತರ ಈ ದಾಳಿಗಳು ಹೆಚ್ಚಾಗಿವೆ. ಒಬ್ಬ ಬಿಜೆಪಿ ಸಮರ್ಥಕರ ಮೇಲೆ ಇದುವರೆಗೆ ದಾಳಿ ನಡೆದಿಲ್ಲ ಎಂದರು.

ಬಿಜೆಪಿ ಸೇರಿದರೆ ಅಂತಹವರ ಮೇಲಿನ ಕೇಸ್ ಗಳು ರದ್ದಾಗುತ್ತವೆ. ಇದು ಸರ್ವಾಧಿಕಾರ ಧೋರಣೆ. ಪ್ರತಿಪಕ್ಷದವರನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಒಂದು ದಿನ ಸತ್ಯ ಹೊರಗೆ ಬಂದೇ ಬರುತ್ತದೆ. ದೇಶದ ನ್ಯಾಯಾಂಗದ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿದರು.

ಬಿಜೆಪಿಯವರು ಭಯಭೀತರಾಗಿದ್ದಾರೆ. ಅವರ ಆತಂಕ ಹೆಚ್ಚಾಗಿದೆ‌.ಅವರ ನಿರೀಕ್ಷೆಗೆ ತಕ್ಕಂತೆ ಸೀಟುಗಳು ಬರುವುದಿಲ್ಲ ಎನ್ನುವುದು ಗೊತ್ತಾಗಿದೆ. ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಚುನಾವಣೆ ಘೋಷಣೆಯಾದ ನಂತರ ಹೆಚ್ಚಾಗಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಬರ ಪರಿಹಾರ ಕೊಟ್ಟಿಲ್ಲ. ರಾಜ್ಯಕ್ಕೆ‌ಅನ್ಯಾಯ ಮಾಡುತ್ತಿದೆ. ಜಿಎಸ್ಟಿಯಲ್ಲಿ ನಮ್ಮ ಪಾಲು ಕೊಟ್ಟಿಲ್ಲ‌.ಕಾಂಗ್ರೆಸ್ ನ್ಯಾಯಕ್ಕಾಗಿ ಹೋರಾಟ ನಡೆಸಲಿದೆ. ಕನಿಷ್ಠ 20 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಹತ್ತು ವರ್ಷ ಸಂಸದರಾಗಿ ಭಗವಂತ ಖೂಬಾ ಏನು ಸಾಧನೆ ಮಾಡಿದ್ದಾರೆ. ಅದರ ಬಗ್ಗೆ ಅವರು ಉತ್ತರಿಸಲಿ.83ನೇ ವಯಸ್ಸಿನಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ದೇಶ ಸುತ್ತಾಡುತ್ತಿದ್ದಾರೆ. ಅವರ ಬಗ್ಗೆ ಮಾತನಾಡುವ ನೈತಿಕತೆ ಖೂಬಾ ಅವರಿಗಿಲ್ಲ. ರಾಜ್ಯಕ್ಕೆ ಖೂಬಾ ಅವರ ಕೊಡುಗೆ ಏನೂ ಇಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ, ಮುಖ್ಯಮಂತ್ರಿ ರಾಜಕೀಯ ಸಲಹೆಗಾರ ಬಿ.ಆರ್. ಪಾಟೀಲ, ಮೀನುಗಾರಿಕೆ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್, ಮುಖಂಡರಾದ ಪ್ರಕಾಶ್ ರಾಠೋಡ್, ಲತಾ ಹಾರಕೂಡ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.