ಬೀದರ್: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಸೋಮವಾರ ಸಂಜೆ ನಗರದ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಬ್ರಿಮ್ಸ್) ಅದರ ಪ್ರಗತಿ ಪರಿಶೀಲನೆ ನಡೆಸಿ, ನಿರ್ದೇಶಕರು ಹಾಗೂ ಅಲ್ಲಿನ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಮುಖ ಆದ್ಯತೆ ಇರುವ ವಿಷಯಗಳನ್ನು ಹೊರತುಪಡಿಸಿ ಹಾಸ್ಟೆಲ್ ಹಾಗೂ ಇತರೆ ಕಟ್ಟಡಗಳ ನವೀಕರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದರು. ‘ಈ ಆಸ್ಪತ್ರೆಯ ವೆಚ್ಚದ ಬಗ್ಗೆ ವಿಶೇಷ ಲೆಕ್ಕ ಪರಿಶೋಧನೆ ಮಾಡಿಸಲಾಗುವುದು. ಏನಕ್ಕೆಲ್ಲ ಹಣ ಖರ್ಚಾಗಿದೆ ಎನ್ನುವುದು ಗೊತ್ತಾಗುತ್ತದೆ. ನಿರ್ದೇಶಕರಾಗಿ ನೀವೇಕೆ ಲೆಕ್ಕಪತ್ರ ಪರಿಶೀಲಿಸುವುದಿಲ್ಲ’ ಎಂದು ಸಭೆಯಲ್ಲಿದ್ದ ಬ್ರಿಮ್ಸ್ ನಿರ್ದೇಶಕ ಶಿವಕುಮಾರ ಶೆಟಕಾರ ಅವರನ್ನು ತರಾಟೆಗೆ ತೆಗೆದುಕೊಂಡರು.
‘ಹಾಸ್ಟೆಲ್ ನವೀಕರಣಕ್ಕಾಗಿಯೇ ₹7 ಕೋಟಿ ಖರ್ಚು ಮಾಡಿದ್ದೀರಿ. ಇತರೆ ಕಟ್ಟಡಗಳೆಲ್ಲ ಸೇರಿದಂತೆ ₹30ರಿಂದ ₹35 ಕೋಟಿ ನವೀಕರಣಕ್ಕೆ ವೆಚ್ಚ ಮಾಡಿದರೆ ಹೇಗೆ? ಯಾವುದು ಅಗತ್ಯ ಆ ಕೆಲಸ ಮೊದಲು ಮಾಡಬೆಕು. ಇದೇ ಹಣದಲ್ಲಿ ಒ.ಟಿ. ಯುನಿಟ್, ಡಯಾಲಿಸಿಸ್ ಘಟಕ ಆರಂಭಿಸಬಹುದಿತ್ತು. ಸರಿಸುಮಾರು ₹52 ಕೋಟಿ ನಿರ್ಮಾಣ ಕಾಮಗಾರಿಯ ಖರ್ಚು ತೋರಿಸಿದ್ದೀರಿ. ಆದರೆ, ₹10ರಿಂದ ₹20 ಲಕ್ಷದಲ್ಲಾಗುವ ಸಣ್ಣ ಕೆಲಸವೇಕೆ ಮಾಡುತ್ತಿಲ್ಲ’ ಎಂದು ಕೇಳಿದರು.
‘450 ಹಾಸಿಗೆ ಸಾಮರ್ಥ್ಯದ ಸರ್ಕಾರಿ ಆಸ್ಪತ್ರೆಯ ಕಟ್ಟಡದ ನವೀಕರಣ 4ರಿಂದ 5 ತಿಂಗಳಲ್ಲಿ ಮುಗಿಸಬಹುದು. ಆದರೆ, ಎರಡು ವರ್ಷ ಕಳೆದು ಹೋದರೂ ಕೆಲಸವಾಗಿಲ್ಲ. ಎರಡು ವರ್ಷ ಬಂದ್ ಮಾಡಿದರೆ ರೋಗಿಗಳು ಎಲ್ಲಿ ತೋರಿಸಿಕೊಳ್ಳಬೇಕು’ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ, ‘ಹಿಂದೆ ಅದನ್ನು ಕೋವಿಡ್ ಆಸ್ಪತ್ರೆಯಾಗಿ ಮಾಡಲಾಗಿತ್ತು. ಶೇ 90ರಷ್ಟು ಕೆಲಸ ಪೂರ್ಣಗೊಂಡಿದೆ. ನೆಲಮಹಡಿ ಹಾಗೂ ಮೊದಲ ಮಹಡಿ ಕೆಲಸ ಇನ್ನೆರಡು ತಿಂಗಳಲ್ಲಿ ಮುಗಿಯಲಿದೆ’ ಎಂದು ಸಮಜಾಯಿಷಿ ನೀಡಿದರು. ಆದರೆ, ಸಚಿವರು ಅದಕ್ಕೆ ತೃಪ್ತರಾಗಲಿಲ್ಲ.
‘ಒ.ಟಿ. ಆರಂಭಿಸಲು ನಿಮಗೆ ಏನು ತೊಂದರೆ ಇದೆ. ₹5 ಕೋಟಿಗೂ ಹೆಚ್ಚು ಹಣ ನಿಮ್ಮಲ್ಲಿಯೇ ಕೊಳಿತಾ ಇದೆ. ಕೊಟ್ಟ ಹಣ ಪೂಜೆ ಮಾಡಿ ಇಟ್ಟಿದ್ದೀರಾ? ಇರುವ ಹಣದಲ್ಲೇ ಕನಿಷ್ಠ ಒಂದು ಒ.ಟಿ. ಆದರೂ ಆರಂಭಿಸಬೇಕಿತ್ತು. ತುರ್ತಾಗಿ ಟೆಂಡರ್ ಕರೆದು ಎರಡು ಒ.ಟಿ. ಆರಂಭಿಸಬೇಕು. ಲಕ್ಷಾಂತರ ರೂಪಾಯಿ ಸೋರಿಕೆ ಆಗಿದೆ. ಒ.ಟಿ. ಮಾಡಲು ಹಣವಿಲ್ಲ ಎಂದು ಹೇಳುತ್ತಿರುವುದು ದುರದೃಷ್ಟಕರ. ಸಾಕಷ್ಟು ದುಡ್ಡು ನಿಮ್ಮ ಬಳಿಯೇ ಇದೆ. ಹಿರಿಯ ವೈದ್ಯರಾದ ನೀವು ಹಣ ಕಡಿಮೆ ಬೀಳುತ್ತಿದೆ ಎಂದು ಹೇಳುತ್ತಿದ್ದೀರಿ’ ಎಂದು ಬೇಸರ ವ್ಯಕ್ತಪಡಿಸಿದರು.
ವಿಟಮಿನ್ ಕೊರತೆ ಪರೀಕ್ಷೆಗೆ ಸೂಚನೆ:
‘ಈ ಭಾಗದಲ್ಲಿ ವಿಟಮಿನ್ ಕೊರತೆಗೆ ಸಂಬಂಧಿಸಿದಂತೆ ತಿಳಿಯಲು ಸಾವಿರ ಜನರ ಪರೀಕ್ಷೆ ನಡೆಸಬೇಕು. ಬಳಿಕ ಅದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಅದೇ ರೀತಿ ಹೃದಯ ಸಂಬಂಧಿ ಕಾಯಿಲೆ ಪರೀಕ್ಷೆಗೆ ವಿಶೇಷ ಶಿಬಿರಗಳನ್ನು ಆಯೋಜಿಸಬೇಕು. ಕೋವಿಡ್ ನಂತರ ಹೃದಯ ಸಂಬಂಧಿ ಕಾಯಿಲೆಗಳಿಂದ ಹೆಚ್ಚಿನ ಜನ ಸಾವನ್ನಪ್ಪುತ್ತಿದ್ದಾರೆ. ಅದಕ್ಕೆ ಹೆಚ್ಚಿನ ಒತ್ತು ಕೊಡಬೇಕು’ ಎಂದು ಸೂಚಿಸಿದರು.
ಪೌರಾಡಳಿತ ಸಚಿವ ರಹೀಂ ಖಾನ್, ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಪ್ರಧಾನ ಕಾರ್ಯದರ್ಶಿ ಜಾವೇದ್ ಅಕ್ತರ್, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಎಂ. ಹಾಗೂ ಬ್ರಿಮ್ಸ್ ಅಧಿಕಾರಿಗಳು ಹಾಜರಿದ್ದರು.
‘ನಾನು ಫೈಲ್ ತಂದಿಲ್ಲ’ ‘ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ಎಚ್ಎಂ) ಯೋಜನೆಯ ಒಂದು ವರ್ಷದ ಮಾಹಿತಿ ಕೊಡಿ’ ಎಂದು ಸಚಿವ ಈಶ್ವರ ಖಂಡ್ರೆ ಕೇಳಿದರು. ಅದಕ್ಕೆ ಡಿಎಚ್ಒ ಡಾ. ರತಿಕಾಂತ ಸ್ವಾಮಿ ಅವರು ’ನಾನು ಆ ಫೈಲ್ ತಂದಿಲ್ಲ’ ಎಂದು ಹೇಳಿದರು. ಒಂದು ಕ್ಷಣ ಅಲ್ಲಿದ್ದವರು ಚಕಿತರಾದರು. ಅದಕ್ಕೆ ಸಚಿವರು ಸಿಟ್ಟಾದರು. ‘ನೀವು ಡಿಎಚ್ಒ ಇದ್ದೀರಿ. ಫೈಲ್ ತಂದಿಲ್ಲ ಅಂದರೆ ಹೇಗೆ?’ ಎಂದು ಖಾರವಾಗಿ ಪ್ರಶ್ನಿಸಿದರು.
‘ಡಿ’ ಗ್ರುಪ್ ನೌಕರರ ಪುನರ್ ನೇಮಕ ‘ಬೆಂಗಳೂರು ಮೈಸೂರು ಹೈದರಾಬಾದ್ ಸೇರಿದಂತೆ ಇತರೆ ಮಹಾನಗರಗಳಲ್ಲಿ ಸಿಗುವ ಆರೋಗ್ಯ ಸೇವೆಗಳನ್ನು ಒಂದು ವರ್ಷದೊಳಗೆ ಬ್ರಿಮ್ಸ್ನಲ್ಲಿ ಕಲ್ಪಿಸಲಾಗುವುದು. ಅವಶ್ಯಕ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. 400 ಹಾಸಿಗೆ ಆಸ್ಪತ್ರೆಯ ಡಿ ಗ್ರುಪ್ ನೌಕರರನ್ನು ಸೇವೆಗೆ ಪುನರ್ ನೇಮಕ ಮಾಡಿಕೊಳ್ಳಲಾಗುವುದು. 442 ದಿನಗಳಿಂದ ಸ್ವಚ್ಛತಾ ಕಾರ್ಮಿಕರು ಧರಣಿ ನಡೆಸುತ್ತಿದ್ದಾರೆ. ಶೀಘ್ರವೇ ಸರ್ಕಾರದಿಂದ ಮಂಜೂರಾತಿ ಪಡೆದು ಕೆಲಸಕ್ಕೆ ನೇಮಿಸಿಕೊಳ್ಳಲಾಗುವುದು’ ಎಂದು ಸಚಿವ ಈಶ್ವರ ಬಿ. ಖಂಡ್ರೆಯವರು ಸಭೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ಬ್ರಿಮ್ಸ್ನಲ್ಲಿ ರೇಡಿಯಾಲಿಜಿ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಸಿಗಬೇಕಿದೆ. ಬರ್ನ್ ಸೆಂಟರ್ ಆರಂಭಿಸಲಾಗುವುದು. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸುತ್ತಿದ್ದು ತುರ್ತು ಚಿಕಿತ್ಸೆ ಸಿಗದೇ ಜನ ಸಾಯುತ್ತಿದ್ದಾರೆ. ಅದಕ್ಕಾಗಿ ಟ್ರಾಮಾ ಕೇರ್ ಸೆಂಟರ್ ನಿರ್ಮಿಸಲು ಪ್ರಸ್ತಾವ ಸಿದ್ಧಪಡಿಸಿ ಸಲ್ಲಿಸಲು ಸೂಚಿಸಲಾಗಿದೆ. ಹಿರಿಯ ನಾಗರಿಕರಿಗೆ ಹತ್ತು ವಿಶೇಷ ಹಾಸಿಗೆಯ ವಾರ್ಡ್ ನಿರ್ಮಿಸಬೇಕು. ಅವರು ಬಂದರೆ ತಕ್ಷಣವೇ ಚಿಕಿತ್ಸೆ ಸಿಗಬೇಕು. ಸಾಲಿನಲ್ಲಿ ನಿಲ್ಲುವಂತಾಗಬಾರದು. ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗೆ 10 ವಾರ್ಡ್ ಹತ್ತು ದಿನಗಳಲ್ಲಿ ಸ್ಥಾಪಿಸಬೇಕೆಂದು ತಿಳಿಸಿದ್ದೇನೆ. ಡಯಾಲಿಸಿಸಿಸ್ಗೆ 40 ಜನ ಕ್ಯೂನಲ್ಲಿ ಇದ್ದಾರೆ. ಒಬ್ಬರು ಕ್ಯೂನಲ್ಲಿ ಇರಬಾರದು. ಎಲ್ಲರಿಗೂ ಚಿಕಿತ್ಸೆ ಸಿಗಬೇಕು. 10 ಯುನಿಟ್ ಡಯಾಲಿಸಿಸ್ ಘಟಕ ವಾರದೊಳಗೆ ಆರಂಭಿಸುವಂತೆ ಸೂಚನೆ ಕೊಟ್ಟಿರುವೆ ಎಂದರು. ಬ್ರಿಮ್ಸ್ನಲ್ಲಿ ಪಿಜಿ ಕೋರ್ಸ್ ಆರಂಭಿಸುವ ಅಗತ್ಯವಿದೆ. ಬೇಡಿಕೆ ಇರುವ ಪಿಜಿ ಕೋರ್ಸ್ ಆರಂಭಿಸಲು ಪ್ರಸ್ತಾವ ಸಲ್ಲಿಸುವಂತೆ ತಿಳಿಸಲಾಗಿದೆ. ಹೃದಯ ಸಂಬಂಧಿ ಚಿಕಿತ್ಸೆ ಶಸ್ತ್ರಚಿಕಿತ್ಸೆಗೆ ಕ್ಯಾಥ್ಲ್ಯಾಬ್ ಆರಂಭಿಸಲಾಗುವುದು. ಕೆಕೆಆರ್ಡಿಬಿಯಿಂದ ₹20 ಕೋಟಿ ಅನುದಾನ ಮಂಜೂರು ಮಾಡಲಾಗುವುದು. ಕಟ್ಟಡ ಸೋರುತ್ತಿದೆ. ಶೌಚಾಲಯ ಸ್ವಚ್ಛತೆ ಸಮಸ್ಯೆ ಇದೆ. ಬ್ರಿಮ್ಸ್ ಖಾತೆಯಲ್ಲಿರುವ ₹5 ಕೋಟಿ ಬಳಸಿಕೊಂಡು ಮೂರು ತಿಂಗಳೊಳಗೆ ಸರಿಪಡಿಸಲು ನಿರ್ದೇಶನ ನೀಡಿದ್ದೇನೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.