ಬಸವಕಲ್ಯಾಣ: ಸಮಾಜ ಕಲ್ಯಾಣ ಇಲಾಖೆ ಆಧೀನದಲ್ಲಿನ ಹಾಸ್ಟೆಲ್ಗಳಲ್ಲಿನ ಪ್ರತಿ ವಿದ್ಯಾರ್ಥಿಯ ಖರ್ಚಿಗಾಗಿ ಸರ್ಕಾರ ಈ ವರ್ಷದಿಂದ ₹ 100 ಹೆಚ್ಚಿಸಿದೆ. ತಾಲ್ಲೂಕಿನ 11 ಹಾಸ್ಟೆಲ್ಗಳಲ್ಲಿ ಸಕಲ ಸೌಲಭ್ಯಗಳಿದ್ದು, ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಬಸವಕಲ್ಯಾಣ ಮತ್ತು ಹುಲಸೂರ ತಾಲ್ಲೂಕುಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯ 11 ಮೆಟ್ರಿಕ್ ಪೂರ್ವ ಮತ್ತು 2 ಕಾಲೇಜು ಹಾಸ್ಟೆಲ್ ಹಾಗೂ ಮೂರು ಆಶ್ರಮ ಶಾಲೆಗಳಿವೆ. ವರ್ಷಕ್ಕೆ ಒಟ್ಟು 1,375 ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಉತ್ತಮ ಊಟದ ಜತೆಗೆ ನಿಗದಿಯಂತೆ ಮೊಟ್ಟೆ, ಮಾಂಸವೂ ಕೊಡಲಾಗುತ್ತದೆ. ಶುದ್ಧ ಕುಡಿಯುವ ನೀರು ಹಾಗೂ ಸ್ನಾನಕ್ಕೆ ಬಿಸಿನೀರು ಒದಗಿಸಲಾಗುತ್ತದೆ.
ಬಸವಕಲ್ಯಾಣ, ಬಟಗೇರಾ, ಕೊಹಿನೂರ, ಮುಚಳಂಬ, ಮುಡಬಿ, ರಾಜೇಶ್ವರ, ಹುಲಸೂರ, ನಾರಾಯಣಪುರ, ಯರಬಾಗ ಗ್ರಾಮಗಳಲ್ಲಿ ಮೆಟ್ರಿಕ್ ಪೂರ್ವ ಮತ್ತು ನಂತರ ಬಾಲಕರ ಹಾಸ್ಟೆಲ್ಗಳಿವೆ. `ಹುಲಸೂರನಲ್ಲಿನ ಕಟ್ಟಡ ಮಾತ್ರ ಶಿಥಿಲಗೊಂಡಿದ್ದರಿಂದ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಇತರೆ ಎಲ್ಲೆಡೆ ಉತ್ತಮ ಕಟ್ಟಡ ಮತ್ತು ಅಡುಗೆ ಸಿಬ್ಬಂದಿಗಳಿದ್ದಾರೆ. ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಲ್ಲಿಕೆಯಾದರೆ, ನಿಗದಿತ ಸಂಖ್ಯೆಗಿಂತ ಹೆಚ್ಚಿನ ವಿದ್ಯಾರ್ಥಿಗಳಿಗೂ ಪ್ರವೇಶ ನೀಡಲಾಗುತ್ತದೆ. ಪ್ರತಿ ವಿದ್ಯಾರ್ಥಿ ನಿಲಯದಲ್ಲಿ ನೀರು ಬಿಸಿ ಮಾಡುವ ಸೋಲಾರ್ ವ್ಯವಸ್ಥೆ ಇದೆ. ಗ್ರಂಥಾಲಯ, ಊಟದ ಕೊಠಡಿಗಳು ಸಹ ಇವೆ' ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿಲೀಪ ಉತ್ತಮ ತಿಳಿಸಿದ್ದಾರೆ.
‘ಪ್ರವೇಶಕ್ಕಾಗಿ 5 ನೇ ತರಗತಿಯಿಂದ 10ನೇ ತರಗತಿವರೆಗಿನ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ಆಧಾರ ಪ್ರತಿ, ಬ್ಯಾಂಕ್ ಖಾತೆ ಸಂಖ್ಯೆ, ಇತ್ತೀಚಿನ 4 ಭಾವಚಿತ್ರಗಳೊಂದಿಗೆ ಅರ್ಜಿಯನ್ನು ಆನ್ ಲೈನ್ ಮೂಲಕ ಸಲ್ಲಿಸಬೇಕು. ಪೋರ್ಟಲ್ನಲ್ಲಿ ಸಲ್ಲಿಸಿದ ಅರ್ಜಿಗಳನ್ನು ಹಾಗೂ ಇತರೆ ದಾಖಲೆಗಳನ್ನು ಸಂಬಂಧಿತ ಶಾಲೆಯ ಮುಖ್ಯಶಿಕ್ಷಕರು ಇಲ್ಲವೇ ಪ್ರಾಂಶುಪಾಲರಿಂದ ದೃಢೀಕರಿಸಿ ಆಯಾ ಹಾಸ್ಟೆಲ್ಗಳ ವಾರ್ಡನ್ಗಳಿಗೆ ಸಲ್ಲಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗಾಗಿ 99726 08914/ 94808 43080 ಈ ಸಂಖ್ಯೆಗಳಿಗೆ ಸಂಪರ್ಕಿಸಬೇಕು' ಎಂದು ಅವರು ಕೋರಿದ್ದಾರೆ.
ಹಾಸ್ಟೆಲ್ ಪ್ರವೇಶ ಕೋರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಎಷ್ಟೇ ಜನ ಅರ್ಜಿ ಸಲ್ಲಿಸಿದರೂ ಪ್ರವೇಶ ನಿಶ್ಚಿತವಾಗಿದೆ.-ದಿಲೀಪ ಉತ್ತಮ ಸಹಾಯಕ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.