ADVERTISEMENT

ಚಿಟಗುಪ್ಪ | ಹೆಚ್ಚಿದ ಚುನಾವಣೆ ಕಾವು: ಕಾರ್ಮಿಕರ ಕೊರತೆ

ಗ್ರಾಮೀಣ ಪ್ರದೇಶಗಳಲ್ಲಿ ಪ್ರಚಾರದ ಭರಾಟೆ

Shwetha Kumari
Published 16 ಏಪ್ರಿಲ್ 2024, 4:57 IST
Last Updated 16 ಏಪ್ರಿಲ್ 2024, 4:57 IST
ಚಿಟಗುಪ್ಪ ತಾಲ್ಲೂಕಿನ ಮಂಗಲಗಿ ಗ್ರಾಮದಲ್ಲಿ ಕೃಷಿ ಕಾರ್ಮಿಕರ ಸಮಸ್ಯೆಯಿಂದಾಗಿ ರೈತರು ಟ್ರ್ಯಾಕ್ಟರ್ ಮೂಲಕ ಹೊಲ ಉಳುಮೆ ಮಾಡಿಕೊಳ್ಳುತ್ತಿರುವುದು
ಚಿಟಗುಪ್ಪ ತಾಲ್ಲೂಕಿನ ಮಂಗಲಗಿ ಗ್ರಾಮದಲ್ಲಿ ಕೃಷಿ ಕಾರ್ಮಿಕರ ಸಮಸ್ಯೆಯಿಂದಾಗಿ ರೈತರು ಟ್ರ್ಯಾಕ್ಟರ್ ಮೂಲಕ ಹೊಲ ಉಳುಮೆ ಮಾಡಿಕೊಳ್ಳುತ್ತಿರುವುದು   

ಚಿಟಗುಪ್ಪ: ಲೋಕಸಭಾ ಚುನಾವಣೆ ಪ್ರಚಾರದ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪಟ್ಟಣಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಅಭ್ಯರ್ಥಿಗಳ ಪ್ರಚಾರದ ಭರಾಟೆ ಜೋರಾಗಿದೆ.

ಪಕ್ಷದ ಕಾರ್ಯಕರ್ತರಲ್ಲದೆ, ಅಭ್ಯರ್ಥಿಗಳ ಮಾಹಿತಿಯನ್ನೊಳಗೊಂಡ ಕ್ಯಾಲೆಂಡರ್‌, ಭಿತ್ತಿಪತ್ರಗಳನ್ನು ಮತದಾರರ ಮನೆಗಳಿಗೆ ತಲುಪಿಸುವುದಕ್ಕೆ ಅಭ್ಯರ್ಥಿಗಳು ದಿನಗೂಲಿ ಆಧಾರದಲ್ಲಿ ಕೃಷಿ ಕಾರ್ಮಿಕ ಮಹಿಳೆಯರು ಹಾಗೂ ಪುರುಷರನ್ನು ಬಳಸಿಕೊಳ್ಳುತ್ತಿದ್ದಾರೆ. ರೈತರು ಕಾರ್ಮಿಕರಿಲ್ಲದ ಕಾರಣ ಹೊಲ–ಗದ್ದೆಗಳ ಕೆಲಸ ಕಾರ್ಯಗಳನ್ನು ಚುನಾವಣೆ ಮುಗಿಯುವವರೆಗೂ ಸ್ಥಗಿತಗೊಳಿಸುವಂತಾಗಿದೆ.

ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಪ್ರಚಾರಕ್ಕೆ ಬಳಸಿಕೊಳ್ಳುವ ಕಾರ್ಮಿಕರಿಗೆ ದಿನಕ್ಕೆ ₹600 ರಿಂದ ₹800 ರವರೆಗೂ ಕೂಲಿ ಪಾವತಿಸುತ್ತಿರುವುದರಿಂದ ಹೊಲ–ಗದ್ದೆ ಕೆಲಸಕ್ಕೆ ಯಾರೂ ಬರುತ್ತಿಲ್ಲ ಎಂದು ನಿರ್ಣಾದ ರೈತ ಮಲ್ಲಪ್ಪ ತಿಳಿಸಿದರು.

ADVERTISEMENT

ಕಾರ್ಮಿಕರು, ನಿತ್ಯ ಬೆಳಿಗ್ಗೆಯಿಂದ ಸಂಜೆಯವರೆಗೂ ಊರೂರು ಸುತ್ತಾಡಿ ಮತದಾರರ ಮನೆಗಳಿಗೆ ಭೇಟಿ ನೀಡಿ ತಾವು ಕೂಲಿ ಪಡೆದು ಕೆಲಸ ಮಾಡುತ್ತಿರುವ ಅಭ್ಯರ್ಥಿ ಪರ ಮತಯಾಚಿಸಿ ಸಂಜೆ ಡಾಬಾಗಳಲ್ಲಿ ಊಟ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾರೆ ಎಂದು ಬೆಳಕೇರಾದ ರೈತ ಶಾಂತಪ್ಪ ಹೇಳಿದರು.

ಅಂಗಡಿಗಳು, ಹೋಟೆಲ್, ರಸ್ತೆ, ಬಸ್ ನಿಲ್ದಾಣ ಹೀಗೆ ಎಲ್ಲೆಂದರಲ್ಲಿ ನಾಲ್ಕೈದು ಜನ ಸಾರ್ವಜನಿಕರು ಸೇರಿಕೊಂಡು ಚುನಾವಣೆ ಚರ್ಚೆಯಲ್ಲಿ ತೊಡಗಿದ್ದಾರೆ. ಚುನಾವಣೆಯದ್ದೇ ಮಾತಾಡುತ್ತಿದ್ದಾರೆ.

ಕೈಗೆ ಬಂದ ತರಕಾರಿ ಬಿಡಿಸಿಕೊಂಡು ಮಾರುಕಟ್ಟೆಗೆ ತರುವುದಕ್ಕೂ ಕಾರ್ಮಿಕರಿಲ್ಲದ್ದಕ್ಕೆ ಬಹುತೇಕ ರೈತರು ಬೆಳೆದ ತರಕಾರಿ ಹೊಲದಲ್ಲಿಯೇ ಕೊಳೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.