ಬೀದರ್: ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಆಚರಿಸಲಾಯಿತು.
ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ವಿಶ್ವಕರ್ಮ ಸಮಾಜ ಸಮಿತಿಯ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಜಕಣಾಚಾರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಸಮಾಜದ ಮುಖಂಡ ವಿಜಯಕುಮಾರ ಪಂಚಾಳ ಮಾತನಾಡಿ, ಭಾರತೀಯ ಶಿಲ್ಪಕಲಾ ಕೌಶಲಕ್ಕೆ ಜಕಣಾಚಾರಿ ಅವರ ಕೊಡುಗೆ ಅಪಾರವಾಗಿದೆ. ಬೇಲೂರು, ಹಳೆಬೀಡು, ಬಾದಾಮಿ, ಪಟ್ಟದಕಲ್ಲು, ಹಂಪಿ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಶಿಲ್ಪಕಲೆಯನ್ನು ಅವರು ಶ್ರೀಮಂತಗೊಳಿಸಿದ್ದಾರೆ. ವಿಶ್ವದ ಗಮನ ಸೆಳೆದಿರುವ ಶಿಲ್ಪಕಲೆಯ ಖ್ಯಾತ ಕಲಾವಿದರು ನಮ್ಮ ರಾಜ್ಯದಲ್ಲೂ ಇದ್ದಾರೆ ಎಂದು ತಿಳಿಸಿದರು.
ಜಕಣಾಚಾರಿ ಅವರ ಕಲೆಯಿಂದಾಗಿಯೇ ವಿಶ್ವಕರ್ಮ ಸಮುದಾಯದವರು ಅಯೋಧ್ಯೆಯ ನೂತನ ರಾಮ ಮಂದಿರ ನಿರ್ಮಾಣಕ್ಕೂ ಕೊಡುಗೆ ನೀಡಲು ಸಾಧ್ಯವಾಗಿದೆ. ಕಾಯಕ ಯಾವುದೇ ಆಗಿರಲಿ ನಿಷ್ಠೆಯಿಂದ ಮಾಡಿದ್ದಲ್ಲಿ ಯಶಸ್ಸು ಲಭಿಸುತ್ತದೆ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಜಿಲ್ಲಾ ವಿಶ್ವಕರ್ಮ ಸಮಾಜ ಸಮಿತಿಯ ಅಧ್ಯಕ್ಷ ಮಹೇಶ ಪಂಚಾಳ, ಪ್ರಧಾನ ಕಾರ್ಯದರ್ಶಿ ಶಿವಾನಂದ ವಿಶ್ವಕರ್ಮ, ಧರ್ಮ ವರ್ಧಿನಿ ಸಂಘದ ಅಧ್ಯಕ್ಷ ಶ್ರೀನಿವಾಸ್ ವಿಶ್ವಕರ್ಮ, ಪ್ರಮುಖರಾದ ಶಾಮರಾವ್, ನಾರಾಯಣ, ಪಾಂಡುರಂಗ ಮನ್ನಳ್ಳಿ, ಬಾಬುರಾವ್ ಚಿಮಕೋಡ್, ಈರಣ್ಣ ವಿಜಯಕುಮಾರ, ಜಯಪ್ರಕಾಶ, ಸಿದ್ಧಾರೂಢ, ಪಾಂಡುಂಗ, ರವಿ, ಸಂಜುಕುಮಾರ, ಈಶ್ವರ, ಸುಭಾಷ್, ವೈಜಿನಾಥ, ಕಾಶಿನಾಥ, ಬಿ.ಕೆ. ಬಡಿಗೇರ, ವಿಶ್ವನಾಥ, ಸಂಜು, ಉಮೇಶ, ಬಾಬುರಾವ್ ಚಾಂಬೋಳ, ಪ್ರಶಾಂತ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.