ADVERTISEMENT

ಜೆಡಿಎಸ್‌ ತೆನೆಹೊತ್ತ ಮಹಿಳೆ ಚಿಹ್ನೆ ಬದಲಿಸಲಿ: ಬಾಬುರಾವ್‌ ಪಾಸ್ವಾನ್‌

​ಪ್ರಜಾವಾಣಿ ವಾರ್ತೆ
Published 5 ಮೇ 2024, 15:32 IST
Last Updated 5 ಮೇ 2024, 15:32 IST
‘ಎದ್ದೇಳು ಕರ್ನಾಟಕ’ ಸಂಘಟನೆಯ ಮುಖಂಡ ಬಾಬುರಾವ್‌ ಪಾಸ್ವಾನ್‌ ಮಾತನಾಡಿದರು
‘ಎದ್ದೇಳು ಕರ್ನಾಟಕ’ ಸಂಘಟನೆಯ ಮುಖಂಡ ಬಾಬುರಾವ್‌ ಪಾಸ್ವಾನ್‌ ಮಾತನಾಡಿದರು   

ಬೀದರ್‌: ‘ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಮಗ ಎಚ್‌.ಡಿ.ರೇವಣ್ಣ, ಅವರ ಮೊಮ್ಮಗ ಪ್ರಜ್ವಲ್‌ ರೇವಣ್ಣನ ಕರ್ಮಕಾಂಡಗಳಿಂದ ರಾಜ್ಯದ ಮಾನ ಹರಾಜಾಗಿದೆ. ಸಾವಿರಾರು ಮಹಿಳೆಯರ ಜೊತೆ ಚೆಲ್ಲಾಟವಾಡಿರುವ ಕಾರಣ ಜೆಡಿಎಸ್‌ ಪಕ್ಷದ ತೆನೆಹೊತ್ತ ಮಹಿಳೆ ಚಿಹ್ನೆ ಇಟ್ಟುಕೊಳ್ಳಲು ಇವರು ಅರ್ಹರಲ್ಲ. ಅದನ್ನು ಬದಲಿಸಿಕೊಳ್ಳಬೇಕು’ ಎಂದು ‘ಎದ್ದೇಳು ಕರ್ನಾಟಕ’ ಸಂಘಟನೆಯ ಮುಖಂಡ ಬಾಬುರಾವ್‌ ಪಾಸ್ವಾನ್‌ ಆಗ್ರಹಿಸಿದರು.

‘ಹಾಸನದ ಪ್ರಕರಣದಲ್ಲಿ ಸಂತ್ರಸ್ತೆಯರು ಸ್ವತಃ ಅವರೇ ಮುಂದು ಬಂದು ದೂರು ಕೊಡುವುದಿಲ್ಲ. ಪೊಲೀಸರು ಸ್ವಯಂಪ್ರೇರಣೆಯಿಂದ ದೂರು ದಾಖಲಿಸಿಕೊಂಡು ಎಫ್‌ಐಆರ್‌ ಹಾಕಬೇಕು’ ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಕೊಲೆಯಾದಾಗ ಆರ್‌ಎಸ್‌ಎಸ್‌, ಬಿಜೆಪಿಯವರು ರಸ್ತೆಗಿಳಿದು ಹೋರಾಟ ನಡೆಸಿದ್ದರು. ಆದರೆ, ಹಾಸನದ ಮಹಿಳೆಯರೊಂದಿಗೆ ನಡೆದ ದುರಾಚಾರದ ಕುರಿತು ಮಾತನಾಡಿಲ್ಲ, ಖಂಡಿಸಿಲ್ಲ. ದೇವೇಗೌಡರ ಕುಟುಂಬ ರೈತರಿಗೆ ಮಣ್ಣು ಮುಕ್ಕಿಸಿದೆ. ಅವರಿಗೆ ಮಾನ ಮರ್ಯಾದೆ ಇಲ್ಲ’ ಎಂದು ಟೀಕಿಸಿದರು.

ADVERTISEMENT

ಮುಖಂಡರಾದ ಜಗದೀಶ್ವರ ಬಿರಾದಾರ, ಅನಿಲ್‌ಕುಮಾರ ಬೇಲ್ದಾರ್‌ ಮಾತನಾಡಿ, ‘ಎಚ್‌.ಡಿ.ರೇವಣ್ಣ, ಪ್ರಜ್ವಲ್‌ ರೇವಣ್ಣನವರ ರಾಕ್ಷಸಿಕೃತ್ಯದಿಂದ ದೇಶದ ಮಾನ ಹರಾಜಾಗಿದೆ. ದೇವೇಗೌಡರು ಈ ಘಟನೆಯನ್ನು ಖಂಡಿಸಿಲ್ಲ. ಬಿಜೆಪಿಯವರು ಬಾಯಿ ಬಿಚ್ಚಿಲ್ಲ. ಸಂತ್ರಸ್ತೆಯರ ಮೇಲೆ ಒತ್ತಡ ಹಾಕುವ ಕೆಲಸ ನಡೆದಿದೆ. ಕೂಡಲೇ ಸರ್ಕಾರವು ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು. ಪ್ರಕರಣದಲ್ಲಿ ಭಾಗಿಯಾದವರಿಗೆ ಕಾನೂನಿನ ಪ್ರಕಾರ ಶಿಕ್ಷಿಸಬೇಕು. ಇದರಲ್ಲಿ ರಾಜಕೀಯ ಮಾಡಬಾರದು’ ಎಂದು ಒತ್ತಾಯಿಸಿದರು.

‘ಪ್ರಜ್ವಲ್‌ ವಿದೇಶಕ್ಕೆ ಓಡಿ ಹೋಗಲು ಕೇಂದ್ರ ಸರ್ಕಾರ ಕಾರಣ. ಕೇಂದ್ರವೇ ಓಡಿ ಹೋಗಲು ವ್ಯವಸ್ಥೆ ಮಾಡಿದೆ. ಹೆಣ್ಣು ಮಕ್ಕಳ ಬಗ್ಗೆ ನಿಜವಾದ ಗೌರವವಿದ್ದರೆ ಕೇಂದ್ರ ಸರ್ಕಾರ ತಕ್ಷಣವೇ ಅವರನ್ನು ದೇಶಕ್ಕೆ ಕರೆತಂದು ಶಿಕ್ಷೆ ವಿಧಿಸುವ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.

‘ಒಬ್ಬ ಸಂಸದನಾಗಿ ಪ್ರಜ್ವಲ್‌ ಮೂರು ಸಾವಿರ ಮಹಿಳೆಯರೊಂದಿಗೆ ಚೆಲ್ಲಾಟವಾಡಿ ಅದರ ವಿಡಿಯೊ ಮಾಡಿದ್ದಾನೆಂದರೆ ನಾಗರಿಕ ಸಮಾಜ ಎತ್ತ ಸಾಗಿದೆ ಎನ್ನುವ ಪ್ರಶ್ನೆ ಮೂಡುತ್ತಿದೆ. ಈ ಘಟನೆಯಿಂದ ಸಮಾಜದಲ್ಲಿ ಕಳವಳಕ್ಕೆ ಕಾರಣವಾಗಿದೆ’ ಎಂದರು. ಓಂಪ್ರಕಾಶ ರೊಟ್ಟೆ, ಅಶೋಕ ಮಾಳಗೆ, ಸಂದೀಪ ಕಾಂಟೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.