ಔರಾದ್: 'ಪ್ರತಿಭಾವಂತರು ಮತ್ತು ನಿಷ್ಠೆಯಿಂದ ಕೆಲಸ ಮಾಡುವವರಿಗೆ ಉದ್ಯೋಗಾವಕಾಶದ ಕೊರತೆ ಇರುವುದಿಲ್ಲ' ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅನೀಲ ಬಿರಾದಾರ ಹೇಳಿದರು.
ತಾಲ್ಲೂಕಿನ ಸಂತಪುರ ದೀಪಾಲಯ ಸಂಸ್ಥೆ ಆಯೋಜಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. 'ಜಗತ್ತಿನಲ್ಲಿ ಭಾರತದ ಯುವ ಶಕ್ತಿಗೆ ಹೆಚ್ಚಿನ ಬೇಡಿಕೆ ಇದೆ. ಯುವ ಸಂಪನ್ಮೂಲ ಸರಿಯಾಗಿ ಬಳಸಿಕೊಂಡರೆ ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ' ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಫಾದರ್ ಡೇವಿಡ್, ಯುವಕರು ಓದಿನ ಜತೆಗೆ ಉದ್ಯೋಗ ಕೌಶಲ್ಯ ಬೆಳೆಸಿಕೊಳ್ಳಬೇಕು. ಇದರಿಂದ ಅವರು ಕುಟುಂಬಕ್ಕೆ ಭಾರವಾಗುವುದಿಲ್ಲ. 300 ವಿದ್ಯಾರ್ಥಿಗಳು ಇಂದಿನ ಮೇಳದಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ. ವಿದ್ಯಾರ್ಹತೆ ಮತ್ತು ಅವರ ಸಾಮರ್ಥ್ಯದ ಮೇಲೆ ಉದ್ಯೋಗ ಸಿಗಲಿದೆ' ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಮುಖ್ಯಾಧಿಕಾರಿ ಜಗನ್ನಾಥರೆಡ್ಡಿ ಮಾತನಾಡಿ, 'ಪ್ರತಿಭಾವಂತರು ಮನೆಯಲ್ಲಿ ಕೂಡಬಾರದು. ದೇಶದ ವಿವಿಧ ಕಂಪನಿಗಳು ಅವರಿಗಾಗಿ ಆಹ್ವಾನ ನೀಡುತ್ತಿವೆ. ಉತ್ತಮವಾಗಿ ಕೆಲಸ ಮಾಡುವ ಮೂಲಕ ಕಂಪನಿಗೆ ಮತ್ತು ದೇಶಕ್ಕೆ ಒಳ್ಳೆ ಹೆಸರು ತಂದುಕೊಡಬೇಕು' ಎಂದು ಸಲಹೆ ನೀಡಿದರು.
ಉಪ ತಹಶೀಲ್ದಾರ್ ರಮೇಶ ಪಾಂಚಾಳ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ, ಅಭಿವೃದ್ಧಿ ಅಧಿಕಾರಿ ಅನಿಲ ಬಿರಾದಾರ, ಅನಿಲ ಜಿರೋಬೆ, ಅರ್ಜುನ ಕನಕ, ಸಿಸ್ಟರ್ ಜೋಯಲ್, ಸಿಸ್ಟರ್ ರಜನಿ ಉಪಸ್ಥಿತರಿದ್ದರು. ಹೈದರಾಬಾದ್, ಬೆಂಗಳೂರು, ಪುಣೆ, ಮುಂಬೈ ಸೇರಿದಂತೆ ವಿವಿಧೆಡೆ ಎಂಟು ಕಂಪನಿಗಳ ಪ್ರತಿನಿಧಿಗಳು ಮೇಳದಲ್ಲಿ ಪಾಲ್ಗೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.