ADVERTISEMENT

ಕೊಡಿಸಬೇಕಿದೆ ಬಸವ ತತ್ವಕ್ಕೆ ನ್ಯಾಯ

ಬೈಲೂರು ನಿಜಗುಣಾನಂದ ಸ್ವಾಮೀಜಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 16:46 IST
Last Updated 18 ಜುಲೈ 2021, 16:46 IST
ಬೀದರ್‌ನ ಬಸವ ಕೇಂದ್ರದಲ್ಲಿ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು
ಬೀದರ್‌ನ ಬಸವ ಕೇಂದ್ರದಲ್ಲಿ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು   

ಬೀದರ್‌: ‘ನಾವೆಲ್ಲ ಪ್ರಾಣ ತೆತ್ತಾದರೂ ಬಸವ ತತ್ವಕ್ಕೆ ನ್ಯಾಯ ಕೊಡಿಸಬೇಕಿದೆ. ಹಣ ಮಾಡುವುದಕ್ಕಾಗಿ ನಾನು ಲಿಂಗಾಯತ ಧರ್ಮಕ್ಕೆ ಬಂದಿಲ್ಲ. ಬಸವಣ್ಣನವರು ಪ್ರತಿಪಾದಿಸಿದ ಜಾತ್ಯತೀತ, ಸಮಸಮಾಜ ನಿರ್ಮಾಣ ಮಾಡಲು ಬಂದಿದ್ದೇನೆ’ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು.

ನಗರದಲ್ಲಿ ಬಸವ ಕೇಂದ್ರದ ವತಿಯಿಂದ ಆಯೋಜಿಸಿದ್ದ ಸಂಶೋಧಕ ಎಂ.ಎಂ.ಕಲಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿಗೆ ಭಾಜನರಾದ ಪ್ರಯುಕ್ತ ಶ್ರೀಗಳಿಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ, ಅವರು ಮಾತನಾಡಿದರು.

‘ಎಂ.ಎಂ. ಕಲಬುರ್ಗಿ ಅವರು ಬಸವಾದಿ ಶರಣರ ವಿಚಾರಧಾರೆಗಳನ್ನು ಜನಮಾನಸಕ್ಕೆ ತಲುಪಿಸಿ ಬಸವ ತತ್ವ ಪ್ರತಿಪಾದನೆ ಹಾಗೂ ಲಿಂಗಾಯತ ಧರ್ಮ ಉಳಿವಿಗಾಗಿ ಪ್ರಾಣ ತೆತ್ತಿದ್ದಾರೆ. ಹೀಗಾಗಿ ಲಿಂಗಾಯತರು ಪುನರ್‌ ವಿಮರ್ಶೆ ಮಾಡಿಕೊಳ್ಳುವುದು ಅಗತ್ಯ’ ಎಂದು ತಿಳಿಸಿದರು.

ADVERTISEMENT

‘ಬಸವ ತತ್ವದ ಶ್ರೇಷ್ಠ ಸಂಶೋಧಕ ಕಲಬುರ್ಗಿ ಅವರ ಹೆಸರಿನ ಪ್ರ್ರಶಸ್ತಿಯನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಈ ದೇಶದಲ್ಲಿ ವೈಚಾರಿಕ ಪ್ರತಿಪಾದನೆ ಮಾಡಿದವರನ್ನು ಹತ್ಯೆ ಮಾಡಲಾಗಿದೆ. ಇಂದು ಸಾಹಿತಿ ಗಳು, ಧರ್ಮಾಧಿಕಾರಿಗಳು ಮೌನ ವಾಗಿರುವುದು ಸೈದ್ಧಾಂತಿಕ ದುರಂತವಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಶಾಸಕ ಶರಣು ಸಲಗರ ಕಾರ್ಯಕ್ರಮ ಉದ್ಘಾಟಿಸಿದರು.

ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ಹಾಗೂ ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿದರು.

ಬಸವ ಸೇವಾ ಪ್ರತಿಷ್ಠಾನದ ಅಕ್ಕ ಗಂಗಾಂಬಿಕೆ ಸಮ್ಮುಖ ವಹಿಸಿದ್ದರು. ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ ಅಧ್ಯಕ್ಷತೆ ವಹಿಸಿದ್ದರು.

ಲಿಂಗಾಯತ ಮಹಾಮಠದ ಪ್ರಭುದೇವರು, ಜಿಲ್ಲಾ ಪಂಚಾಯಿತಿ ಮಾಜಿ ಆಧ್ಯಕ್ಷ ಕುಶಾಲರಾವ್ ಪಾಟೀಲ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಸೋಮಶೇಖರ ಪಾಟೀಲ, ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಬಸವರಾಜ ಧನ್ನೂರ್, ಅಖಿಲ ಭಾರತ ಲಿಂಗಾಯತ ಸಮಿತಿಯ ಸಂಚಾಲಕ ಶ್ರೀಶಾಂತ ಸ್ವಾಮಿ, ಮಹಿಳಾ ಬಸವಕೇಂದ್ರ ಅಧ್ಯಕ್ಷರಾದ ವಿದ್ಯಾವತಿ ಬಲ್ಲೂರ ಇದ್ದರು.

ಬಸವರಾಜ ಬಲ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ ಚನಶೆಟ್ಟಿ ಸ್ವಾಗತಿಸಿದರು. ಶಿವಶಂಕರ ಟೋಕರೆ ನಿರೂಪಿಸಿದರು. ಜಗನಾಥ ಶಿವಯೋಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.