ಬಸವಕಲ್ಯಾಣ: ಕಲ್ಯಾಣ ಪರ್ವದ ಕೊನೆಯ ದಿನ ಬುಧವಾರ ಸಮಾರೋಪ ಸಮಾರಂಭಕ್ಕೂ ಮೊದಲು ಕೂಡಲ ಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ನೇತೃತ್ವದಲ್ಲಿ ನಗರದ ಮಧ್ಯ ಭಾಗದಲ್ಲಿನ ಬಸವಣ್ಣನವರ ಪರುಷಕಟ್ಟೆಯಿಂದ ಬಸವ ಮಹಾಮನೆ ಆವರಣದಲ್ಲಿನ ಕಾರ್ಯಕ್ರಮದ ಸ್ಥಳಕ್ಕೆ ಬಸವಜ್ಯೋತಿ ತೆಗೆದುಕೊಂಡು ಹೋಗಲಾಯಿತು.
ಪರುಷಕಟ್ಟೆಯಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿ, ಜ್ಯೋತಿ ಹೊತ್ತಿಸಿಕೊಂಡ ನಂತರ ಮಾತೆ ಗಂಗಾದೇವಿಯವರು ಮಾತನಾಡಿ, `ಬಸವಣ್ಣನವರು ಈ ಪರುಷಕಟ್ಟೆಯ ಮೇಲೆ ಆಸೀನರಾಗಿ ತಮ್ಮ ಪರುಷ ಹಸ್ತದಿಂದ ಭಕ್ತರಿಗೆ ಬೇಡಿರುವುದನ್ನು ಕೊಡುತ್ತಿದ್ದರು. ಈ ಸ್ಥಳದಿಂದ ಕಳೆದ 20 ವರ್ಷಗಳಿಂದ ಪ್ರತಿವರ್ಷ ಕಲ್ಯಾಣ ಪರ್ವದ ಕೊನೆಯ ದಿನ ಜ್ಯೋತಿ ತೆಗೆದುಕೊಂಡು ಹೋಗಲಾಗುತ್ತಿದೆ. ಬೆಂಗಳೂರಿನ ಸಮೀಪ ಬಸವಣ್ಣನವರ ಬೃಹತ್ ಪ್ರತಿಮೆ ಪ್ರತಿಷ್ಠಾಪನೆಯ ಕಾರ್ಯ ಸಾಗಿದ್ದು ಅದು ಪೂರ್ಣಗೊಳ್ಳುವಂತೆ ಗುರು ಬಸವಣ್ಣನವರು ಆಶೀರ್ವದಿಸಬೇಕು ಎಂದು ಭಕ್ತರ ಪರವಾಗಿ ಇಲ್ಲಿ ಬೇಡಿಕೊಂಡಿದ್ದೇನೆ’ ಎಂದರು.
ಬೆಂಗಳೂರಿನ ಚನ್ನಬಸವಾನಂದ ಸ್ವಾಮೀಜಿ, ಮಾತೆ ಸುಜ್ಞಾನಿದೇವಿ, ಮಾತೆ ಸತ್ಯಕ್ಕತಾಯಿ, ರಾಷ್ಟ್ರೀಯ ಬಸವದಳದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಶಿವಪುರ, ವೀರಣ್ಣ ಕೊರ್ಲಳ್ಳಿ ಪಾಲ್ಗೊಂಡಿದ್ದರು.
ಧಿಕ್ಕಾರದ ಘೋಷಣೆ: ಜ್ಯೋತಿಯನ್ನು ಕಾರಿನಲ್ಲಿಟ್ಟು ಮುಖ್ಯ ರಸ್ತೆಯಿಂದ ಹೋಗುವಾಗ ಬಸವೇಶ್ವರ ವೃತ್ತದಲ್ಲಿ ಗುಂಪುಗೂಡಿದ್ದ ಬಸವೇಶ್ವರ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಹಾಗೂ ಬಸವಪರ ಸಂಘಟನೆಯವರು ಧಿಕ್ಕಾರದ ಘೋಷಣೆ ಕೂಗಿದರು.
ಮಾತೆ ಮಹಾದೇವಿ ಅವರು ಬಸವಣ್ಣನವರ ವಚನಾಂಕಿತ ತಿರುಚಿ ಬರೆದಿರುವ ಗ್ರಂಥಗಳನ್ನು ಪುನರ್ ಮುದ್ರಿಸಿ ಮಾರಾಟ ಮಾಡಲಾಗುತ್ತಿದೆ. ಇದು ಶರಣರಿಗೆ ಬಗೆದ ಅಪಚಾರವಾಗಿದೆ. ಆದ್ದರಿಂದ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಕಾರ್ಯಕರ್ತರು ಹೇಳಿದರು. ಪ್ರಮುಖರಾದ ಬಸವರಾಜ ಬಾಲಿಕಿಲೆ, ಜಗನ್ನಾಥ ಖೂಬಾ, ಮಲ್ಲಿಕಾರ್ಜುನ ಕುರಕೋಟೆ, ಸುರೇಶ ಸ್ವಾಮಿ, ಬಸವರಾಜ ಕೋರಕೆ, ಶಿವಕುಮಾರ ಬಿರಾದಾರ, ರವೀಂದ್ರ ಕೊಳಕೂರ, ಶರಣಯ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.