ಭಾಲ್ಕಿ: ಗಡಿ ಭಾಗದಲ್ಲಿ ಕನ್ನಡ ಕಟ್ಟಿ, ಬೆಳೆಸಿದ ಡಾ.ಚನ್ನಬಸವ ಪಟ್ಟದ್ದೇವರ ಜಯಂತ್ಯುತ್ಸವವನ್ನು ಡಿ.22ರಂದು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಆಚರಿಸಲಾಗುವುದು ಎಂದು ಕಸಾಪದ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಶಿ ಭರವಸೆ ನೀಡಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶನಿವಾರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಬೀದರ್ನಿಂದ ಚುನಾವಣೆ ಪ್ರಚಾರ ಕಾರ್ಯ ಆರಂಭಿಸಿದ್ದೆ. ಅಂದು ಶ್ರೀಗಳು ನೀಡಿದ್ದ ಆಶೀರ್ವಾದದಿಂದ ಇಂದು ರಾಜ್ಯಾಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ನನ್ನ ಆಯ್ಕೆಯಾಗುವಲ್ಲಿ ಪಟ್ಟದ್ದೇವರ ಆಶೀರ್ವಾದ ದೊಡ್ಡದಿದೆ ಎಂದು ಹೇಳಿದರು.
ಡಾ.ಚನ್ನಬಸವ ಪಟ್ಟದ್ದೇವರು ಈ ನಾಡಿಗೆ ತಮ್ಮದೆ ಆದ ಕೊಡುಗೆ ನೀಡಿದ್ದರು. ನಿಜಾಂನ ಆಳ್ವಿಕೆಯಲ್ಲಿ ಹೊರಗಡೆ ಉರ್ದು ನಾಮಫಲಕ ಅಳವಡಿಸಿ, ಒಳಗಡೆ ಕನ್ನಡ ಕಲಿಸಿದ ಕೀರ್ತಿ ಪಟ್ಟದ್ದೇವರಿಗೆ ಸಲ್ಲುತ್ತದೆ. ಅಂತಹ ಮಹಾತ್ಮರ ಜೀವನ ಮತ್ತು ಸಾಧನೆ ರಾಜ್ಯದಾದ್ಯಂತ ಪರಿಚಯಿಸುವುದು ಅಗತ್ಯವಿದೆ ಎಂದು ತಿಳಿಸಿದರು.
ಮುಂಬರುವ ದಿನಗಳಲ್ಲಿ ಬಸವಕಲ್ಯಾಣದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆಯು ಚಿಂತನೆ ನಡೆಸಲಾಗುವುದು ಎಂದು ಆಶ್ವಾಸನೆ ನೀಡಿದರು.
ಸಾನ್ನಿಧ್ಯ ವಹಿಸಿದ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಡಾ.ಮಹೇಶ ಜೋಶಿ ಅವರ ಅವಧಿಯಲ್ಲಿ ಗಮನ ಸೆಳೆಯುವ ಪರಿಷತ್ತು ಆಗಲಿದೆ ಎಂದರು.
ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ, ಸಾಹಿತಿ ರಮೇಶ ಬಿರಾದಾರ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜಪ್ಪ ಪಾಟೀಲ, ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಸುಂಟೆ, ರಮೇಶ ಚಿದ್ರಿ, ಸಂಗಮೇಶ ಮದಕಟ್ಟಿ, ಕಾಶಿನಾಥ ಲದ್ದೆ, ರಾಜಕುಮಾರ ಬಿರಾದಾರ, ನಾಗಭೂಷಣ ಮಾಮಡಿ, ಸಂಗಮೇಶ ಗುಮ್ಮೆ, ಸಂತೋಷ ಬಿಜಿ ಪಾಟೀಲ, ರವಿ ಬೋರವೆಲ್ಸ್, ಸಂಗಮೇಶ ವಾಲೆ, ಪ್ರಭು ಡಿಗ್ಗೆ, ಬಸವರಾಜ ಮಡಿವಾಳ, ಹಣಮಂತ ಕಾರಾಮುಂಗೆ, ಬಾಬು ಬೆಲ್ದಾಳ ಇದ್ದರು.
ಶಶಿಧರ ಕೋಸಂಬೆ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿ, ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.