ಬೆಂಗಳೂರು: ಮಾನವ ಹಕ್ಕುಗಳ ಉಲ್ಲಂಘನೆಯಿಂದ ತೊಂದರೆಗೆ ಒಳಗಾದವರು ನ್ಯಾಯ ಕೇಳಿ ಇನ್ನು ಮುಂದೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಕಚೇರಿಗೆ ಹೋಗಬೇಕಿಲ್ಲ. ಜನಸ್ನೇಹಿಯಾಗಲು ಮುಂದಾಗಿರುವ ಆಯೋಗ, ದೂರು ಸ್ವೀಕರಿಸಲು ‘ಮೊಬೈಲ್ ಆ್ಯಪ್‘ (ಕೆಎಸ್ಎಚ್ಆರ್ಸಿ ಆ್ಯಪ್) ಅಭಿವೃದ್ಧಿಪಡಿಸಿದೆ.
ದೇಶದಲ್ಲೇ ಮೊದಲ ಬಾರಿಗೆ ಇಂಥದ್ದೊಂದು ಆ್ಯಪ್ ಅಭಿವೃದ್ಧಿ ಪಡಿಸಲಾಗಿದ್ದು, ಸದ್ಯದಲ್ಲೇ ಚಾಲನೆ ನೀಡಲಿದೆ. ಇದು ಧ್ವನಿ ಇಲ್ಲದವರು, ಶೋಷಣೆಗೆ ಒಳಗಾದವರು, ಬಡ, ದುಃಖಿತ ಸಮುದಾಯದ ಜನರು ಆನ್ಲೈನ್ ಮೂಲಕ ಸುಲಭವಾಗಿ ಆಯೋಗದ ಕದ ತಟ್ಟಬಹುದಾಗಿದೆ.
ಈ ಆ್ಯಪ್ನಲ್ಲಿ ‘ಆನ್ಲೈನ್ ದೂರು ನೋಂದಣಿ’ ಬಟನ್ ಒತ್ತಿ ದೂರು ದಾಖಲಿಸಬಹುದು. ಆಯೋಗಕ್ಕೆ ಸಂಬಂಧಿಸಿದ ಮಾಹಿತಿ, ದೂರುಗಳಿಗೆ ಸಂಬಂಧಿಸಿದ ಆದೇಶಗಳು, ಹಕ್ಕುಗಳು, ರಾಷ್ಟ್ರೀಯ ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿವರಗಳನ್ನು ತಿಳಿಯಬಹುದು.
ಆಯೋಗದ ಕಚೇರಿ ಸದ್ಯ ಬೆಂಗಳೂರಿನಲ್ಲಿ ಇದ್ದು, ನೊಂದವರು ಇಲ್ಲಿಗೇ ಬಂದು ದೂರು ನೀಡಬೇಕಿತ್ತು.
‘ಪ್ರಧಾನಿ ನರೇಂದ್ರ ಮೋದಿಯವರ ‘ಡಿಜಿಟಲ್ ಇಂಡಿಯಾ’ ಕಲ್ಪನೆಯ ಭಾಗವಾಗಿ ತಂತ್ರಜ್ಞಾನ ಆಧಾರಿತ
ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ’ ಎಂದು ಆಯೋಗದ ಅಧ್ಯಕ್ಷ, ನ್ಯಾಯಮೂರ್ತಿ ಡಿ.ಎಚ್. ವಘೇಲಾ ತಿಳಿಸಿದ್ದಾರೆ.
‘ಆಯೋಗ ಕಳೆದ 30 ತಿಂಗಳಲ್ಲಿ ನಡೆಸಿದ ಕಾರ್ಯಕಲಾಪಗಳ ಮೂಲಕ 15 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿದೆ. ಮುಂದಿನದಿನಗಳಲ್ಲಿ ಪ್ರಮುಖ ನಗರಗಳಲ್ಲಷ್ಟೇ ಅಲ್ಲದೆ, ಗ್ರಾಮಗಳಲ್ಲಿಯೂ ಮಾನವ ಹಕ್ಕುಗಳ ಸಂರಕ್ಷಣೆಗೆ ಇರುವ ಕಾನೂನುಗಳ ಕುರಿತು ಅರಿವು ಮೂಡಿಸಲು ಮತ್ತು ನೊಂದವರ ನೆರವಿಗೆ ಧಾವಿಸಲು ಯೋಜನೆ ರೂಪಿಸಲಾಗಿದೆ’ ಎಂದು ಅವರು ವಿವರಿಸಿದ್ದಾರೆ.
*
ಯಾವುದೇ ಸ್ಥಳದಿಂದ, ಯಾವುದೇ ಸಮಯದಲ್ಲಿ ಪ್ರತಿಯೊಬ್ಬರು ಸುಲಭ ಹಾಗೂ ಸರಳವಾಗಿ ದೂರು ಸಲ್ಲಿಸಲು ಈ ‘ಆ್ಯಪ್’ ನೆರವಿಗೆ ಬರಲಿದೆ ನ್ಯಾಯಮೂರ್ತಿ.
-ಡಿ.ಎಚ್. ವಘೇಲಾ, ಅಧ್ಯಕ್ಷರು, ರಾಜ್ಯ ಮಾನವ ಹಕ್ಕುಗಳ ಆಯೋಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.