
ಭಾಲ್ಕಿ: ತಾಲ್ಲೂಕಿನ ಖಾನಾಪುರದ ಮಲ್ಲಣ್ಣ ದೇವಸ್ಥಾನದಲ್ಲಿ ಭಾನುವಾರ ಮಲ್ಲಣ್ಣ ದೇವರ ಜಾತ್ರೆ ನಿಮಿತ್ತ ಮಲ್ಲಣ್ಣ ದೇವರ ದರುಶನ ಪಡೆದು ಅಸಂಖ್ಯ ಭಕ್ತರು ಕೃತಾರ್ಥರಾದರು.
ಭಾನುವಾರ ಬೆಳಿಗ್ಗೆ ದೇವರ ಅಭಿಷೇಕ, ಮಹಾ ಆರತಿಯಾದ ನಂತರ ಭಕ್ತರಿಗೆ ದೇವರ ದರುಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ರಾತ್ರಿ 2 ಗಂಟೆಯಿಂದಲೇ ಭಕ್ತರು, ಮೈಕೊರೆಯುವ ಚಳಿಯಲ್ಲೇ ಮೈಲಾರಲಿಂಗನ ಭಕ್ತಿಯಲ್ಲಿ ಮುಳುಗಿ ಕುಂಡದಲ್ಲಿ ಸ್ನಾನ ಮಾಡಿ ದೇವರ ದರುಶನಕ್ಕಾಗಿ ಸಾಲುಗಟ್ಟಿದ್ದರು.
ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶದಿಂದಲೂ ಭಕ್ತರು ಬಂದಿದ್ದರು. ದೇವರ ದರುಶನ ಪಡೆದು ಭಂಡಾರ ಹಾರಿಸುವ ದೃಶ್ಯ ನೋಡಲು ರೋಮಾಂಚನವಾಗಿತ್ತು. ಎಲ್ಲಿ ನೋಡಿದರೂ ಏಳು ಕೋಟಿ ಏಳು ಕೋಟಿ ಉಘೇ, ಜಯ ಮಲ್ಹಾರ ಶಿವ ಮಲ್ಹಾರ ಎಂಬ ಜಯಘೋಷಗಳ ಘೋಷಣೆ ಮುಗಿಲು ಮುಟ್ಟಿತ್ತು. ಜಾತಿ, ಮತ, ಪಂಥ ಎನ್ನದೆ ಭಕ್ತರು ಭಂಡಾರದ ಮಳೆಯಲ್ಲಿ ಮಿಂದೆದ್ದ ಮನಮೋಹಕ ದೃಶ್ಯ ಮನ ಸೆಳೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.