ಬಸವಕಲ್ಯಾಣ (ಬೀದರ್ ಜಿಲ್ಲೆ): ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಎನ್ಸಿಪಿಯಿಂದ
ಸ್ಪರ್ಧಿಸಿ ನಾಮಪತ್ರ ಹಿಂದಕ್ಕೆ ಪಡೆದು ಬಿಜೆಪಿಗೆ ಬೆಂಬಲಿಸಿರುವ ಮಾಜಿ ಶಾಸಕ ಮಾರುತಿರಾವ್ ಮುಳೆ ಅವರ ಭಾವಚಿತ್ರಕ್ಕೆ ಶಿವಾಜಿ ಪಾರ್ಕ್ನಲ್ಲಿ ಸೋಮವಾರ ಮರಾಠಾ ಸಮಾಜದ ಇನ್ನೊಂದು ಬಣದವರು ಕ್ಷೀರಾಭಿಷೇಕ ಮಾಡಿದರು.
‘ಮುಳೆ ಅವರು ಬಿಜೆಪಿ ಬೆಂಬಲಿಸಿದ್ದನ್ನು ವಿರೋಧಿಸಿ ಕೆಲವರು ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಅವಮಾನ ಮಾಡಿದ್ದರು. ಹೀಗಾಗಿ ಕ್ಷೀರಾಭಿಷೇಕ ನಡೆಸಲಾಯಿತು’ ಎಂದು ಮರಾಠಾ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಟಿ.ಶಿಂಧೆ ತಿಳಿಸಿದ್ದಾರೆ.
‘ನಗರದ ಪಾರ್ಕ್ದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮೊದಲು ಹಾಲು ಮತ್ತು ನೀರಿನಿಂದ ತೊಳೆದು ಪೂಜೆ ಮಾಡಲಾಯಿತು. ನಂತರ ಮುಳೆ ಅವರ ಭಾವಚಿತ್ರ ಶುದ್ಧೀಕರಿಸಲಾಯಿತು. ತದನಂತರ ಸಭೆ ನಡೆಸಿ, ಸಮಾಜದ ಗಣ್ಯ ವ್ಯಕ್ತಿಯನ್ನೇ ಅವಮಾನ ಮಾಡಿದ್ದನ್ನು ಒಕ್ಕೊರಲಿನಿಂದ ಖಂಡಿಸಲಾಯಿತು’ ಎಂದು ಹೇಳಿದ್ದಾರೆ.
‘ಮರಾಠಾ ಸಮಾಜದ ಅಭಿವೃದ್ಧಿ ನಿಗಮದ ಅಧ್ಯಕ್ಷರ ನೇಮಕಾತಿ ಒಳಗೊಂಡು 6 ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಿಕೊಂಡಿದ್ದರಿಂದ ಮುಳೆ ಅವರು ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಆದರೆ, ಇದನ್ನು ಸಹಿಸದ ಅನ್ಯ ಪಕ್ಷಗಳಲ್ಲಿನ ಕೆಲ ಮರಾಠರು ಪ್ರತಿಭಟನೆ ನಡೆಸಿದ್ದಾರೆ’ ಎಂದು ತಿಳಿಸಿದ್ದಾರೆ.
ಮುಳೆ ಬೆಂಬಲಿಗರ ಸಭೆಯಲ್ಲಿ ಮುಖಂಡರಾದ ತಾತೇರಾವ್ ಪಾಟೀಲ, ಜ್ಞಾನೇಶ್ವರ ಮುಳೆ, ಸಂಭಾಜಿ ಜಗತಾಪ, ರಾಜೀವ್ ಭೋಸ್ಲೆ, ವಿಶ್ವನಾಥ ಪಾಟೀಲ ಲಾಡವಂತಿ, ಬಾಲು ಪಾಟೀಲ ಹೊನ್ನಳ್ಳಿ, ಬಾಳಾ ಅಷ್ಟೆ, ದೀಪಕ ನಾಗದೆ, ವಿನಯಕುಮಾರ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.