ಬೀದರ್: ಜನಸೇವಾ ಪ್ರತಿಷ್ಠಾನ ಸಂಚಾಲಿತ ಇಲ್ಲಿಯ ಪ್ರತಾಪನಗರದ ಜನಸೇವಾ ಗೋವಿನ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಭೇಟಿ ನೀಡಿದರು.
ಗೋವಿಗೆ ಹಿಡಿ ಮೇವು ತಿನ್ನಿಸಿದ ಅವರು, ಪ್ರತಿಯೊಬ್ಬರೂ ಗೋವುಗಳ ರಕ್ಷಣೆಗೆ ಮುಂದಾಗಬೇಕು. ಸಣ್ಣ ಸಣ್ಣ ಪ್ರಮಾಣದ ಗೋ ಶಾಲೆಗಳಿಗೂ ಸರ್ಕಾರ ಅಗತ್ಯ ನೆರವು ನೀಡಲಿದೆ ಎಂದು ತಿಳಿಸಿದರು.
ಗೋವಿನ ಮನೆಗೆ ವೈಯಕ್ತಿಕವಾಗಿ ₹ 21 ಸಾವಿರ ಸಹಾಯಧನ ನೀಡಿದರು. ನಂತರ ಜನಸೇವಾ ಶಾಲೆಯಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮವನ್ನು ಗಾಂಧಿ ಹಾಗೂ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಪಣೆ ಮಾಡಿ ಉದ್ಘಾಟಿಸಿದರು.
ಶಿಕ್ಷಕಿ ಶಿವಲೀಲಾ ಅವರು ಗಾಂಧೀಜಿ ಅವರ ಅಹಿಂಸಾ ತತ್ವ ಹಾಗೂ ಸಾಧನೆ ಕುರಿತು ಮತ್ತು ಶಿಕ್ಷಕಿ ವನಜಾಕ್ಷಿ ಕವೆಲಿಮನಿ ಅವರು ಶಾಸ್ತ್ರಿ ಅವರ ಸೇವಾ ನಿಷ್ಠೆ ಹಾಗೂ ಪ್ರಾಮಾಣಿಕತೆ ಕುರಿತು ಮಾತನಾಡಿದರು.
ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ಪ್ರತಿಷ್ಠಾನದ ಖಜಾಂಚಿ ಶಿವರಾಜ ಹುಡೇದ್, ಆಡಳಿತ ಮಂಡಳಿ ಸದಸ್ಯರಾದ ಬಿ.ಎಸ್ ಕುದರೆ, ಶಿವಲಿಂಗಪ್ಪ ಜಲಾದೆ, ಕೆ. ಕಾಶೀನಾಥ, ಆಡಳಿತಾಧಿಕಾರಿ ಸೌಭಾಗ್ಯವತಿ, ಶಿಕ್ಷಕರಾದ ಮೀರಾಬಾಯಿ ಸ್ವಾಮಿ, ಮಹೇಶ್ವರಿ ಆಣದೂರೆ, ಕೆಕೆಎಚ್ಆರ್ಎಸಿಎಸ್ ತಾಲ್ಲೂಕು ಸಂಯೋಜಕ ಗುರುನಾಥ ರಾಜಗೀರಾ ಉಪಸ್ಥಿತರಿದ್ದರು.
ಶಿಕ್ಷಕ ರಾಹುಲ್ ನಿರೂಪಿಸಿದರು. ಮುಖ್ಯಶಿಕ್ಷಕ ಶಿವಾನಂದ ಮಲ್ಲ ವಂದಿಸಿದರು. ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.