ADVERTISEMENT

ಮಾತೃಭಾಷಾ ಶಿಕ್ಷಣ ಪರಿಣಾಮಕಾರಿ: ಪ್ರತಿಭಾ ಚಾಮಾ ಅಭಿಮತ

ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಪ್ರತಿಭಾ ಚಾಮಾ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 11:17 IST
Last Updated 5 ಮಾರ್ಚ್ 2021, 11:17 IST
ಬೀದರ್‌ನ ಜೀಜಾಮಾತಾ ಕನ್ಯಾ ಪ್ರೌಢಶಾಲೆಯಲ್ಲಿ ನಡೆದ ಬಸವೇಶ್ವರ ಬಿ.ಎಡ್. ಕಾಲೇಜು ವಿದ್ಯಾರ್ಥಿಗಳ ಪ್ರಾಯೋಗಿಕ ಪಾಠಗಳ ಸಮಾರೋಪ ಕಾರ್ಯಕ್ರಮದಲ್ಲಿ ಡಿಡಿಪಿಐ ಕಚೇರಿ ಶಿಕ್ಷಣಾಧಿಕಾರಿ ಟಿ.ಆರ್. ದೊಡ್ಡೆ ದೀಬ ಬೆಳಗಿಸಿದರು. ಸತೀಶ್ ಮುಳೆ, ವೀಣಾ ಜಲಾದಿ, ಪ್ರತಿಭಾ ಚಾಮಾ, ಪರಮೇಶ್ವರ ಬಿರಾದಾರ, ಮಲ್ಲಿಕಾರ್ಜುನ ಬೆಂಬುಳಗೆ, ಮಲ್ಲಪ್ಪ ಹೂಗಾಡೆ ಇದ್ದರು
ಬೀದರ್‌ನ ಜೀಜಾಮಾತಾ ಕನ್ಯಾ ಪ್ರೌಢಶಾಲೆಯಲ್ಲಿ ನಡೆದ ಬಸವೇಶ್ವರ ಬಿ.ಎಡ್. ಕಾಲೇಜು ವಿದ್ಯಾರ್ಥಿಗಳ ಪ್ರಾಯೋಗಿಕ ಪಾಠಗಳ ಸಮಾರೋಪ ಕಾರ್ಯಕ್ರಮದಲ್ಲಿ ಡಿಡಿಪಿಐ ಕಚೇರಿ ಶಿಕ್ಷಣಾಧಿಕಾರಿ ಟಿ.ಆರ್. ದೊಡ್ಡೆ ದೀಬ ಬೆಳಗಿಸಿದರು. ಸತೀಶ್ ಮುಳೆ, ವೀಣಾ ಜಲಾದಿ, ಪ್ರತಿಭಾ ಚಾಮಾ, ಪರಮೇಶ್ವರ ಬಿರಾದಾರ, ಮಲ್ಲಿಕಾರ್ಜುನ ಬೆಂಬುಳಗೆ, ಮಲ್ಲಪ್ಪ ಹೂಗಾಡೆ ಇದ್ದರು   

ಬೀದರ್: ‘ಮಾತೃಭಾಷೆಯಲ್ಲಿ ನೀಡುವ ಶಿಕ್ಷಣ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಪ್ರತಿಭಾ ಚಾಮಾ ಅಭಿಪ್ರಾಯಪಟ್ಟರು.

ಇಲ್ಲಿಯ ಜೀಜಾಮಾತಾ ಕನ್ಯಾ ಪ್ರೌಢಶಾಲೆಯಲ್ಲಿ ನಡೆದ ಬಸವೇಶ್ವರ ಬಿ.ಎಡ್ ಕಾಲೇಜು ವಿದ್ಯಾರ್ಥಿಗಳ ಪ್ರಾಯೋಗಿಕ ಪಾಠಗಳ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಂವಹನ ಹಾಗೂ ಅರ್ಥೈಸುವಿಕೆಯಲ್ಲಿ ಮಾತೃಭಾಷೆಯ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಪಾಲಕರು ತಮ್ಮ ಮಕ್ಕಳಿಗೆ ಕನ್ನಡದಲ್ಲೇ ಶಿಕ್ಷಣ ಕೊಡಿಸಬೇಕು’ ಎಂದು ಸಲಹೆ ಮಾಡಿದರು.

ADVERTISEMENT

‘ಅಧ್ಯಯನದಿಂದಲೇ ಜ್ಞಾನಮಟ್ಟ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. ವಿದ್ಯಾರ್ಥಿಗಳು ಓದಿನತ್ತ ಹೆಚ್ಚು ಗಮನ ಕೊಡಬೇಕು ಎಂದು ಕಾರ್ಯಕ್ರಮ ಉದ್ಘಾಟಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ಅಧಿಕಾರಿ ಟಿ.ಆರ್. ದೊಡ್ಡೆ ಹೇಳಿದರು.

‘ಮಕ್ಕಳಿಗೆ ವಿಷಯ ಮನದಟ್ಟು ಮಾಡಿಕೊಡಲು ಶಿಕ್ಷಕರು ಬೋಧನಾ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳನ್ನು ಅರಿಯಬೇಕು’ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಮಹಾನ್ ವ್ಯಕ್ತಿಗಳು ಹಾಗೂ ಸಾಧಕರ ಕುರಿತ ಪುಸ್ತಕಗಳನ್ನು ಓದಬೇಕು. ಪರಿಶ್ರಮದ ಮೂಲಕ ಜೀವನದಲ್ಲಿ ಸಾಧನೆಗೆ ಪ್ರಯತ್ನಿಸಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಶಿವ ಛತ್ರಪತಿ ಸ್ಮಾರಕ ಸಮಿತಿಯ ಸಂಚಾಲಕ ಸತೀಶ್ ಮುಳೆ ಹೇಳಿದರು.

ಶಿವ ಛತ್ರಪತಿ ಸ್ಮಾರಕ ಸಮಿತಿ ಸಂಚಾಲಿತ ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಜತೆಗೆ ನೈತಿಕ ಹಾಗೂ ಮಾನವೀಯ ಮೌಲ್ಯಗಳ ಶಿಕ್ಷಣ ಸಹ ಕೊಡಲಾಗುತ್ತಿದೆ ಎಂದು ತಿಳಿಸಿದರು.

ಬಿ.ಎಡ್. ಪ್ರಶಿಕ್ಷಣಾರ್ಥಿಗಳು ಉತ್ತಮ ಶಿಕ್ಷಕರಾಗಲು ಪ್ರಯತ್ನಿಸಬೇಕು. ಆದರ್ಶ ಪ್ರಜೆಗಳನ್ನು ರೂಪಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಜೀಜಾಮಾತಾ ಕನ್ಯಾ ಪ್ರೌಢಶಾಲೆ ಮುಖ್ಯ ಶಿಕ್ಷಕ ಪರಮೇಶ್ವರ ಬಿರಾದಾರ ಹೇಳಿದರು.

ಉಪನ್ಯಾಸಕಿ ಪ್ರೊ.ವೀಣಾ ಜಲಾದಿ ಮಾತನಾಡಿದರು. ಜೀಜಾಮಾತಾ ಪ್ರೌಢಶಾಲೆ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಬೆಂಬುಳಗೆ, ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಮಲ್ಲಪ್ಪ ಹೂಗಾಡೆ, ಶಿಕ್ಷಕರಾದ ಪ್ರಭಣ್ಣ ಕಾಳಗೊಂಡ, ಮೋಹನ್ ಜೋಶಿ, ರಾಜಕುಮಾರ ಗಾದಗೆ, ಅನಿಲಕುಮಾರ ರಾಮರತನ್, ನಾಗರತ್ನ, ಗಾಯತ್ರಿ, ಸಂಜಯ್ ಪಾಟೀಲ, ಆನಂದ ಜಾಧವ್ ಇದ್ದರು.

ಬಿ.ಎಡ್ ವಿದ್ಯಾರ್ಥಿ ಶಿವಕುಮಾರ ನಿರೂಪಿಸಿದರು. ಕಾವೇರಿ ಸ್ವಾಗತಿಸಿದರು. ರೇಖಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.