ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ವತಿಯಿಂದ ಭಾನುವಾರ (ಜ.31) ನಗರದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ರೇಸ್ ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಹಾವಶೆಟ್ಟಿ ಪಾಟೀಲ ತಿಳಿಸಿದ್ದಾರೆ.
ಬೆಳಿಗ್ಗೆ 7ಕ್ಕೆ ನಗರದ ಹೊಸ ಬಸ್ ನಿಲ್ದಾಣ ಪಕ್ಕದ ಶಿವಸಾಯಿ ಬಜಾರ್ ಹತ್ತಿರದಿಂದ ಸೈಕಲ್ ರೇಸ್ ಪ್ರಾರಂಭವಾಗಲಿದೆ. ಅಲ್ಲಿಂದ ನೌಬಾದ್ ಬಸವೇಶ್ವರ ವೃತ್ತಕ್ಕೆ ತೆರಳಿ ಪುನಃ ಶಿವಸಾಯಿ ಬಜಾರ್ಗೆ ಬರಲಿದೆ. 10 ಕಿಲೋ ಮೀಟರ್ ಸ್ಪರ್ಧೆ ಇದಾಗಿದೆ ಎಂದು ಹೇಳಿದ್ದಾರೆ.
ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ, ಬೀದರ್ ಜಿಲ್ಲಾ ಅಮೆಚ್ಯೂರ್ ಅಥ್ಲೆಟಿಕ್ ಕ್ಲಬ್ ಅಧ್ಯಕ್ಷ ಬಾಬು ವಾಲಿ, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಹಿರಿಯ ಪತ್ರಕರ್ತ ಸ.ದಾ.ಜೋಶಿ ಅವರು ಸ್ಪರ್ಧೆಗೆ ಹಸಿರು ನಿಶಾನೆ ತೋರುವರು ಎಂದು ತಿಳಿಸಿದ್ದಾರೆ.
8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಗೇರ್ ಸೈಕಲ್ ಬಳಸುವುದಕ್ಕೆ ಅವಕಾಶವಿಲ್ಲ. ವಿಜೇತರಿಗೆ ಪ್ರಥಮ ಬಹುಮಾನ ಎಂಟಿಬಿ ಸೈಕಲ್, ದ್ವಿತೀಯ ಬಹುಮಾನ ₹ 2,100, ತೃತೀಯ ಬಹುಮಾನ ₹ 1,100 ನೀಡಲಾಗುತ್ತದೆ. ಆಸಕ್ತರು ಹೆಸರು ನೋಂದಣಿ ಮಾಡಲು ಮೊಬೈಲ್ ಸಂಖ್ಯೆ 94481 25349/ 99867 92323/94482 26122 ಗೆ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
ಉತ್ತಮ ಆರೋಗ್ಯ ಹಾಗೂ ಪರಿಸರ ಸಂರಕ್ಷಣೆ ದೃಷ್ಟಿಯಿಂದ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಜನರು ಸೈಕಲ್ ಬಳಸಬೇಕೆಂಬ ಉದ್ದೇಶದಿಂದ ಪ್ರತಿ ವರ್ಷ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗುತ್ತಿದೆ. ರೋಟರಿ ಪದಾಧಿಕಾರಿಗಳು, ಪ್ರಮುಖರು ನಗರದ ಜ್ಞಾನಸುಧಾ, ಗುರುನಾನಕ, ಜೀಜಾಮಾತಾ, ಸಮತಾ, ಅರುಣೋದಯ ಮೊದಲಾದ ಪ್ರೌಢ ಶಾಲೆಗಳಿಗೆ ಭೇಟಿ ನೀಡಿ ಸ್ಪರ್ಧೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಕೋರಲಾಗಿದೆ. ವಿದ್ಯಾರ್ಥಿಗಳು ಸೈಕಲ್ ಸ್ಪರ್ಧೆ ಬಗ್ಗೆ ಆಸಕ್ತಿ ವಹಿಸಿರುವುದು ಸಂತಸದ ಸಂಗತಿ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.