ಬೀದರ್: ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ವತಿಯಿಂದ ಆಯೋಜಿಸಿದ್ದ ಧರಿನಾಡಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಮಾತು ಆಡಿಲ್ಲ ಎಂದು ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಬಾಬುರಾವ್ ವಡ್ಡೆ ಸ್ಪಷ್ಟಪಡಿಸಿದ್ದಾರೆ.
ಹೆಬ್ಬಾಳೆ ಅವರು ನಾನು ಸಹಜವಾಗಿ ಆಡಿರುವ ಮಾತುಗಳನ್ನು ತಿರುಚಿ ಪತ್ರಿಕಾ ಪ್ರಕಟಣೆ ನೀಡಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಸುರೇಶ ಚನಶೆಟ್ಟಿ ಅವರಿಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ತಿಳಿಸಿದ್ದಾರೆ.
ಸುರೇಶ ಚನಶೆಟ್ಟಿ ಐದು ವರ್ಷ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡ ಭವನದ ಅಡಿಗಲ್ಲು ಸಮಾರಂಭದಲ್ಲಿ ಚನಶೆಟ್ಟಿ ಮತ್ತೊಂದು ಅವಧಿಗೆ ಮುಂದುವರಿಯಬೇಕು ಎಂದು ಮೊದಲು ಪ್ರಸ್ತಾಪಿಸಿದ್ದೇ ನಾನು. ಚನಶೆಟ್ಟಿ ಅವರ ನಾಮಪತ್ರ ಸಲ್ಲಿಕೆ, ಕರಪತ್ರ ಬಿಡುಗಡೆ, ಚುನಾವಣೆ ಪ್ರಚಾರ ಸಭೆಯ ಅಧ್ಯಕ್ಷತೆ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ನಾನು ಸ್ವತಃ ಮುಂದೆ ಇದ್ದೆ. ಹೀಗಾಗಿ ಹೆಬ್ಬಾಳೆ ಅವರನ್ನು ಬೆಂಬಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.
ಅಭಿಪ್ರಾಯಗಳನ್ನು ತಿರುಚಿ ಬರೆಯುವಲ್ಲಿ ನಿಸ್ಸೀಮರಾದ ಹೆಬ್ಬಾಳೆ ಸದಾ ವಾಮ ಮಾರ್ಗದಲ್ಲೇ ಚುನಾವಣೆ ಎದುರಿಸಿದ್ದಾರೆ. ಈಗಲೂ ಅದೇ ಕುತಂತ್ರ ಮುಂದುವರಿಸಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.
ಉತ್ತಮ ಕೆಲಸ ಮಾಡಿದವರನ್ನು ಬೆಂಬಲಿಸುವುದು ನಾಗರಿಕ ಸಮಾಜದ ಆದ್ಯ ಕರ್ತವ್ಯ. ನಾನು ಅದನ್ನು ಪಾಲಿಸುತ್ತೇನೆ. ಹೆಬ್ಬಾಳೆ ನೀಡಿದ ಪತ್ರಿಕಾ ಪ್ರಕಟಣೆ ಶುದ್ಧ ಸುಳ್ಳಾಗಿದೆ. ನವೆಂಬರ್ 25ಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಎಲ್ಲ ಮತದಾರರು ಸುರೇಶ ಚನಶೆಟ್ಟಿ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.