ADVERTISEMENT

ನಿರ್ಣಾ: ಜಾತ್ರಾ ಮಹೋತ್ಸವ ಡಿ.15ರಿಂದ

ತಾಲ್ಲೂಕಿನ ನಿರ್ಣಾ ಗುತ್ತಿ ಬಸವಣ್ಣ ಸನ್ನಿಧಿಗೆ ಸಹಸ್ರಾರು ಭಕ್ತರ ಭೇಟಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 12:34 IST
Last Updated 13 ಡಿಸೆಂಬರ್ 2019, 12:34 IST
ಚಿಟಗುಪ್ಪ ಸಮೀಪದ ಚಾಂಗಲೇರಾ ಗ್ರಾಮದ ವೀರಭದ್ರೇಶ್ವರ ದೇವಾಲಯ
ಚಿಟಗುಪ್ಪ ಸಮೀಪದ ಚಾಂಗಲೇರಾ ಗ್ರಾಮದ ವೀರಭದ್ರೇಶ್ವರ ದೇವಾಲಯ   

ಚಿಟಗುಪ್ಪ: ತಾಲ್ಲೂಕಿನ ಐತಿಹಾಸಿಕ ನಿರ್ಣಾ ಗ್ರಾಮದ ಗುತ್ತಿಬಸವಣ್ಣ ದೇವರ ಜಾತ್ರೆಯು ಡಿ.15 ರಿಂದ 19ರವರೆಗೆ ನಡೆಯಲಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ.

ವಿಶಾಲವಾದ ಅರಣ್ಯ ಪ್ರದೇಶದಲ್ಲಿ ನಿರ್ಮಾಣಗೊಂಡ ದೇಗುಲದ ಸುತ್ತಲಿನ ಪ್ರದೇಶದಲ್ಲಿ ಮುಗಿಲೆತ್ತರಕ್ಕೆ ಬೆಳೆದಿರುವ ಪುರಾತನ ಆಲದ ಮರಗಳಿಗೆ ವಿದ್ಯುತ್ ದೀಪಗಳಿಂದ ಸಿಂಗಾರಗೊಳಿಸಲಾಗಿದೆ. ಕಲ್ಯಾಣ ಮಂಟಪದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

ಗುತ್ತಿಬಸವಣ್ಣ ಇಲ್ಲಿನ ಜನರ ಆರಾಧ್ಯ ದೈವ. ನಾಟಕ, ಕೋಲಾಟ,ವಾಲಿಬಾಲ್ ಟೂರ್ನಿ ಸೇರಿದಂತೆ ವಿಶಿಷ್ಟ ಕಲೆ, ಸಂಸ್ಕೃತಿ ಹಾಗೂ ಕ್ರೀಡೆಯನ್ನು ಪ್ರತಿಬಿಂಬಿಸುವುದು ಈ ಜಾತ್ರೆಯ ವಿಶೇಷ.

ADVERTISEMENT

ಜಾತಿ, ಮತ, ಧರ್ಮ ಮೀರಿ ಎಲ್ಲರೂ ಒಗ್ಗೂಡಿ ಸಂಭ್ರಮದಿಂದ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಐದು ದಿನ ನಡೆಯುವ ಈ ವಿಶಿಷ್ಟ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರು ಸಾಕ್ಷ್ಯಿಯಾಗುತ್ತಾರೆ.

ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಡಿ.15 ರಿಂದ ಆರಂಭವಾಗಲಿವೆ ಎಂದು ಗುತ್ತಿಬಸವಣ್ಣ ದೇವಸ್ಥಾನದ ಜಾತ್ರಾ ವ್ಯವಸ್ಥಾಪಕ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

ಡಿ.15 ರ ಬೆಳಿಗ್ಗೆ 6ಕ್ಕೆ ರುದ್ರಾಭಿಷೇಕ, ಮಹಾಮಂಗಳಾರತಿ, ರಾತ್ರಿ 8 ಗಂಟೆಗೆ ಗ್ರಾಮದ ಮಠದಿಂದ ದೇಗುಲದವರೆಗೆ ದೇವರ ಪಲ್ಲಕ್ಕಿ ಮೆರವಣಿಗೆ ಭಜನೆ, ಪುರವಂತರ ಪುರವಂತಿಗೆ ಸೇವೆಯೊಂದಿಗೆ ಉತ್ಸವ ಜರುಗಲಿದೆ.

ಡಿ.16 ರಂದು ಬೆಳಿಗ್ಗೆ 6 ಗಂಟೆಗೆ ದೇವರಿಗೆ ಮಹಾರುದ್ರಾಭಿಷೇಕ ಪೂಜೆ ನಡೆಯುತ್ತದೆ. ರಾತ್ರಿ 8 ಗಂಟೆಗೆ ನಗೆ ಹಬ್ಬ ಕಾರ್ಯಕ್ರಮ ನಡೆಯುತ್ತದೆ. ವಿವಿಧೆಡೆಗಳಿಂದ ಆಗಮಿಸಿದ ಹಾಸ್ಯಕಲಾವಿದರು ಪಾಲ್ಗೊಳ್ಳಲಿದ್ದಾರೆ. ನಂತರ ಸಿಡಿಮದ್ದುಗುಂಡು, ವಿದ್ಯುತ್ ದೀಪಾಲಂಕಾರಗಳಿಂದ ಪಲ್ಲಕ್ಕಿ ಮೆರವಣಿಗೆ ನಂತರ ಭಕ್ತರ ಮಧ್ಯೆ ವಿವಿಧ ಪುಷ್ಪಮಾಲೆಗಳಿಂದ ಅಲಂಕರಿಸಿದ ರಥೋತ್ಸವ ನಡೆಯುವುದು. ಜಾತ್ರೆಯ ಪೂಜಾ ಕಾರ್ಯಕ್ರಮಗಳಲ್ಲಿ ಸ್ವಂತದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಬಾಲಯೋಗಿ ಶಂಕರಲಿಂಗ ಮಹಾರಾಜ್, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ.

ಡಿ.17ಕ್ಕೆ ಬೆಳಗ್ಗೆ 8 ಗಂಟೆಗೆ ರಾಜ್ಯ, ಆಂಧ್ರಪ್ರದೇಶ, ತೆಲಂಗಾಣಗಳಿಂದ ಆಗಮಿಸುವ ಕುಸ್ತಿ ಪೈಲ್‌ವಾನರಿಂದ ಜಂಗಿ ಕುಸ್ತಿ ಸ್ಪರ್ಧೆ ನಡೆಯುವುದು. ಸಂಜೆ 4 ಗಂಟೆಗೆ ಪಶುಗಳ ಪ್ರದರ್ಶನ ನಡೆಯುವುದು. ಈ ಪ್ರದರ್ಶನದಲ್ಲಿ ಭಾಗವಹಿಸುವ ಜಾನುವಾರುಗಳಿಗೆ ಹಾಗೂ ರೈತರಿಗೆ ಬಹುಮಾನ ವಿತರಿಸಲಾಗುವುದು. ನಂತರ ಪಾಲ್ಗೊಂಡ ಎಲ್ಲರಿಗೂ ದೇಗುಲದಿಂದ ಮಹಾಪ್ರಸಾದ ವಿತರಿಸಲಾಗುತ್ತದೆ. ಸಂಜೆ 5 ರಿಂದ 10 ರವರೆಗೆ ಕಲಗಿ, ತುರಾಯಿ ಕಾರ್ಯಕ್ರಮ ನಡೆಯುವುದು.

ಡಿ.18 ರಂದು ವಾಲಿಬಾಲ್ ಟೂರ್ನಿ ನಡೆಸಿ ಪ್ರಥಮ, ದ್ವಿತಿಯ, ತೃತಿಯ ಸ್ಥಾನ ಪಡೆದ ಟೀಮ್‌ಗಳ ಕ್ರೀಡಾಪಟುಗಳಿಗೆ ದೇಗುಲದಿಂದ ನಗದು ಹಣ ನೀಡಿ ಸನ್ಮಾನಿಸಲಾಗುತ್ತದೆ.

ಡಿ.19ಕ್ಕೆ ಪುರವಂತರ ಸೇವೆಯೊಂದಿಗೆ ಬಾಜ ಭಜಂತ್ರಿ ಮೂಲಕ ದೇವಾಲಯದಿಂದ ನಿರ್ಣಾ ಗ್ರಾಮದವರೆಗೆ ಪಲ್ಲಕ್ಕಿ ಉತ್ಸವ ನಡೆಸಿ, ಮಠದಲ್ಲಿ ಮಹಾಮಂಗಳಾರತಿ ಮೂಲಕ ಜಾತ್ರೆಗೆ ವಿದಾಯ ಹೇಳಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.