ADVERTISEMENT

ಬಿತ್ತನೆ ಬೀಜದ ಸಮಸ್ಯೆಗೆ ಆಸ್ಪದ ಬೇಡ: ಶಾಸಕ ಬಂಡೆಪ್ಪ ಕಾಶೆಂಪುರ

ರೈತರಿಗೆ ಸರಿಯಾದ ಸಮಯಕ್ಕೆ ಗುಣಮಟ್ಟದ ಬೀಜ ವಿತರಿಸಿ

​ಪ್ರಜಾವಾಣಿ ವಾರ್ತೆ
Published 23 ಮೇ 2022, 15:35 IST
Last Updated 23 ಮೇ 2022, 15:35 IST
ಬೀದರ್ ತಾಲ್ಲೂಕಿನ ಕಾಶೆಂಪುರ ಗ್ರಾಮದಲ್ಲಿ ಶಾಸಕ ಬಂಡೆಪ್ಪ ಕಾಶೆಂಪುರ ಅವರು ಮುಂಗಾರು ಹಂಗಾಮು ಪ್ರಯುಕ್ತ ಕೃಷಿ ಅಧಿಕಾರಿಗಳ ಸಭೆ ನಡೆಸಿದರು
ಬೀದರ್ ತಾಲ್ಲೂಕಿನ ಕಾಶೆಂಪುರ ಗ್ರಾಮದಲ್ಲಿ ಶಾಸಕ ಬಂಡೆಪ್ಪ ಕಾಶೆಂಪುರ ಅವರು ಮುಂಗಾರು ಹಂಗಾಮು ಪ್ರಯುಕ್ತ ಕೃಷಿ ಅಧಿಕಾರಿಗಳ ಸಭೆ ನಡೆಸಿದರು   

ಕಾಶೆಂಪುರ (ಜನವಾಡ): ಮುಂಗಾರು ಹಂಗಾಮಿನಲ್ಲಿ ರೈತರ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ ವಿತರಣೆ ಮಾಡಬೇಕು. ಬೀಜ ವಿತರಣೆಯಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಬಂಡೆಪ್ಪ ಕಾಶೆಂಪುರ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.


ಬೀದರ್ ತಾಲ್ಲೂಕಿನ ಕಾಶೆಂಪುರ ಗ್ರಾಮದ ಹೊರವಲಯದಲ್ಲಿ ಇರುವ ತಮ್ಮ ನಿವಾಸದಲ್ಲಿ ಬೀದರ್ ಮತ್ತು ಹುಮನಾಬಾದ್ ತಾಲ್ಲೂಕುಗಳ ಸಹಾಯಕ ಕೃಷಿ ನಿರ್ದೇಶಕರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.


ಸರಿಯಾಗಿ ಪರಿಶೀಲನೆ ನಡೆಸಿದ ಬೀಜಗಳನ್ನು ರೈತರಿಗೆ ತಲುಪಿಸಬೇಕು. ಸರಿಯಾದ ಸಮಯಕ್ಕೆ ಬೀಜ ವಿತರಿಸಬೇಕು. ಬಿತ್ತನೆ, ಬೀಜಗಳ ವಿಚಾರದಲ್ಲಿ ರೈತರಲ್ಲಿ ಗೊಂದಲ ಉಂಟಾದಲ್ಲಿ ಕೂಡಲೇ ಅವರ ನೆರವಿಗೆ ಧಾವಿಸಬೇಕು ಎಂದು ತಿಳಿಸಿದರು.

ADVERTISEMENT


ಹೆಚ್ಚಾಗಿ ಸೋಯಾ ಅವರೆ, ಉದ್ದು, ಹೆಸರು, ತೊಗರಿ ಬಿತ್ತನೆ ಮಾಡಲಾಗುತ್ತಿದೆ. ಪ್ರತಿ ವರ್ಷದಂತೆ ಅಧಿಕ ಪ್ರಮಾಣದಲ್ಲಿ ಸೋಯಾ ಬಿತ್ತನೆ ಮಾಡಲಾಗುತ್ತಿದೆ. ಬೀಜಗಳ ಕೊರತೆಯಾಗದಂತೆ ಸಂಗ್ರಹಿಸಿಟ್ಟುಕೊಳ್ಳಬೇಕು. ರೈತರು ಕೇಳಿದ ಸಮಯಕ್ಕೆ ಬೀಜ ವಿತರಿಸಬೇಕು ಎಂದ ಹೇಳಿದರು.


2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೀದರ್ ತಾಲ್ಲೂಕಿನ ಒಟ್ಟು ಬಿತ್ತನೆ ಕ್ಷೇತ್ರವು 51,080 ಹೆಕ್ಟೇರ್ ಇದೆ. ಅದರಲ್ಲಿ ಮುಖ್ಯವಾಗಿ ಸೋಯಾ ಅವರೆ 22,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ಸಾಧ್ಯತೆ ಇದೆ. ಉಳಿದಂತೆ ಉದ್ದು, ಹೆಸರು, ತೊಗರಿ, ಜೋಳ, ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳ ಬಿತ್ತನೆಯಾಗಲಿದೆ ಎಂದು ಬೀದರ್ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ ಹೊಸಾಳೆ ಮಾಹಿತಿ ನೀಡಿದರು.


ಹುಮನಾಬಾದ್ ತಾಲ್ಲೂಕಿನ ಒಟ್ಟು ಬಿತ್ತನೆ ಕ್ಷೇತ್ರ 62,000 ಹೆಕ್ಟೇರ್ ಆಗಿದೆ. ಅದರಲ್ಲಿ 22,000 ಹೆಕ್ಟೇರ್ ಸೋಯಾ, 19,000 ಹೆಕ್ಟೇರ್ ತೊಗರಿ, 10,000 ಹೆಕ್ಟೇರ್ ಉದ್ದು, 8,000 ಹೆಕ್ಟೇರ್ ಹೆಸರು ಬಿತ್ತನೆಯಾಗುವ ಸಾಧ್ಯತೆ ಇದೆ ಎಂದು ಹುಮನಾಬಾದ್ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಗೌತಮ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.