ಔರಾದ್: ‘ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆ ಹಾಗೂ ದೇಶ ಸೇವೆ ಮನೋಭಾವನೆ ಬರಲು ರಾಷ್ಟ್ರೀಯ ಸೇವಾ ಯೋಜನೆಯಂತಹ ಶಿಬಿರಗಳು ಪೂರಕವಾಗಲಿವೆ’ ಎಂದು ಪ್ರಾಂಶುಪಾಲೆ ಅಂಬಿಕಾದೇವಿ ಕೊತಮೀರ್ ಹೇಳಿದರು.
ತಾಲ್ಲೂಕಿನ ಗಣೇಶಪೂರ ಗ್ರಾಮದಲ್ಲಿ ಶನಿವಾರ ಸರ್ಕಾರಿ ಪದವಿ ಕಾಲೇಜು ಎನ್ಎಸ್ಎಸ್ ಶಿಬಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭಾರತ ಸಮನ್ವಯ ನಾಡಾಗಿದೆ. ಶಾಂತಿ, ಸಹಬಾಳ್ವೆ, ಸಹೋದರತೆ ಬಯಸುವ ದೇಶ. ದೇಶದ ಹಿತವೇ ನಮ್ಮ ಹಿತ. ಈ ಭಾವನೆ ಪ್ರತಿಯೊಬ್ಬ ಭಾರತೀಯನಲ್ಲಿ ಬರಬೇಕು. ಯುವಕರು ವೈಯಕ್ತಿಕ ಬೆಳವಣಿಗೆ ಜತೆಗೆ ದೇಶದ ಬೆಳವಣಿಗೆಯಲ್ಲೂ ಒಂದಿಷ್ಟು ಕೊಡುಗೆ ನೀಡಬೇಕು’ ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಜ್ಞಾನೇಶ್ವರ ಶಿಬಿರ ಉದ್ಘಾಟಿಸಿ,‘ಗ್ರಾಮೀಣ ಭಾಗದಲ್ಲಿ ಇಂದಿಗೂ ಪರಸ್ಪರ ಸಹೋದರ ಭಾವ ಬಲವಾಗಿದೆ. ಭಾರತೀಯ ಮೌಲ್ಯಯುತ ಸಂಸ್ಕೃತಿ ಇದಕ್ಕೆ ಪೂರಕ’ ಎಂದು ಹೇಳಿದರು.
ಶಿಬಿರದ ಸಂಯೋಜಕ ವಿನಾಯಕ ಮಾತನಾಡಿ,‘ವಿದ್ಯಾರ್ಥಿಗಳಲ್ಲಿ ಶ್ರಮ ಸಂಸ್ಕೃತಿ ಹಾಗೂ ನಾಯಕತ್ವ ಗುಣ ಬೆಳೆಸುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರ ಆಯೋಜಿಲಾಗುತ್ತದೆ’ ಎಂದರು.
ಉಪನ್ಯಾಸಕ ರಾಮಣ್ಣ ಉಪ್ಪಾರ,‘ವಿದ್ಯಾರ್ಥಿಗಳು ಸಹನೆ, ಸಮಯ ಪ್ರಜ್ಞೆ, ಆತ್ಮ ವಿಶ್ವಾಸ, ಪರಿಶ್ರಮದಂತಹ ಮೌಲ್ಯಗಳು ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
ಉಪನ್ಯಾಸಕ ಸಂಜುಕುಮಾರ ತಾಂದಳೆ, ಸುನೀಲ ಮಾಳಗೆ, ದಯಾನಂದ ಬಾವುಗೆ ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.