ಚಿಟಗುಪ್ಪ: ಮಕ್ಕಳ ಪೌಷ್ಟಿಕಾಂಶದ ಕುರಿತು ತಾಯಂದಿರು ನಿರ್ಲಕ್ಷ್ಯ ವಹಿಸಿದರೆ ಭವಿಷ್ಯದಲ್ಲಿ ಆರೋಗ್ಯ ಸಮಸ್ಯೆ ತೀವ್ರವಾಗಲಿದೆ. ಅವರಲ್ಲಿ ದೇಹದ ಪ್ರತಿರೋಧ ಶಕ್ತಿ ಕೂಡ ಕುಂಠಿತವಾಗುವ ಸಂಭವ ಇದೆ’ ಎಂದು ಹುಡಗಿ ವಲಯ ಆರೋಗ್ಯ ಮೇಲ್ವಿಚಾರಕಿ ದೈವತಾ ತಿಳಿಸಿದರು.
ತಾಲ್ಲೂಕಿನ ಬೆಳಕೇರಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶನಿವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹುಮನಾಬಾದ್ ಶಿಶು ಅಭಿವೃದ್ಧಿ ಯೋಜನೆ ಆರೋಗ್ಯ ಇಲಾಖೆ ಆಶ್ರಯದಲ್ಲಿ ನಡೆದ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಸಪ್ತಾಹ, ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ ಸಪ್ತಾಹ, ರಾಷ್ಟ್ರೀಯ ಪೋಷಣ ಅಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಖ್ಯ ಶಿಕ್ಷಕ ಬಾಬುರಾವ್ ಅಂಬಲೆ ಮಾತನಾಡಿ,‘ಮಗುವಿಗೆ ಬಾಲ್ಯದಲ್ಲಿ ಪೌಷ್ಟಿಕ ಆಹಾರ ಸಿಗದಿದ್ದರೆ ಅದು ಮುಂದೆಂದೂ ಶಕ್ತಿಶಾಲಿಯಾಗದು ಹಾಗೂ ದೇಹದ ಯಾವ ಅಂಗವು ಬೆಳವಣಿಗೆಯಾಗುವುದಿಲ್ಲ. ಅಂಥ ಮಕ್ಕಳು ವಾತಾವರಣದ ಏರುಪೇರನ್ನು ಎದುರಿಸಲಾರರು ಹಾಗೂ ಸದಾ ಯಾವುದಾದರೊಂದು ಕಾಯಿಲೆಗೆ ತುತ್ತಾಗುತ್ತಾರೆ’ ಎಂದರು.
ಮುಂದೊಂದು ದಿನ ಆಹಾರ ಸಿಕ್ಕರೂ ಜೀರ್ಣಾಂಗ ವ್ಯವಸ್ಥೆಯೇ ಸಹಕರಿಸುವುದಿಲ್ಲ. ಮಕ್ಕಳಿಗೆ ಪೌಷ್ಟಿಕತೆಗಾಗಿ ನಾವೆಲ್ಲ ದೃಢ ಸಂಕಲ್ಪ ತೊಟ್ಟು ದೂರದೃಷ್ಟಿ ಯೋಜನೆಗಳನ್ನು ರೂಪಿಸಿ ಅಪೌಷ್ಟಿಕತೆಗೆ ಕೊನೆ ಹಾಡಬೇಕು ಎಂದರು.
ಶಿಕ್ಷಕ ಅನೀಲಕುಮಾರ ಸಿರಮುಂಡಿ ಮಾತನಾಡಿ,‘ಹೆಚ್ಚಾಗಿ ಬಾಣಂತಿಯರಿಗೆ ಮೊದಲ ಮೂರು ತಿಂಗಳು ಪಥ್ಯದ ಅವಧಿಯಲ್ಲಿ ಕೇವಲ ಅನ್ನ ನೀಡಲಾಗುತ್ತದೆ. ಬೇಳೆ–ಕಾಳು, ಕಾಯಿಪಲ್ಲೆಗಳ ಸೇವನೆ ನಿರ್ಬಂಧಿಸಲಾಗುತ್ತದೆ. ಪಾಲಿಷ್ ಮಾಡಿದ ಅಕ್ಕಿಯ ಅನ್ನವನ್ನು ಊಟಕ್ಕೆ ಬಳಸುವ ತಾಯಂದಿರ ಎದೆಹಾಲಿನಲ್ಲಿ ವಿಟಮಿನ್ ಬಿ1 ಕೊರತೆಯಾಗಿ, ಶಿಶು ಸಮಸ್ಯೆ ಎದುರಿಸುತ್ತದೆ. ಪಾಲಿಷ್ ಮಾಡದ ಅಕ್ಕಿಯ ಅನ್ನದ ಜತೆಗೆ ಬೇಳೆ ಕಾಳು ಹಾಗೂ ತರಕಾರಿಯನ್ನೊಳಗೊಂಡ ಊಟ ಒದಗಿಸಿದಲ್ಲಿ ಈ ರೀತಿಯ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದರು.
ಆರೋಗ್ಯ ಇಲಾಖೆಯ ಕಿರಿಯ ಸಹಾಯಕಿ ಕಸ್ತೂರಬಾಯಿ, ಶಿಕ್ಷಕರಾದ ವಿಕ್ಟರ್ ರೊಬಿನ್ಸನ್, ದಿಲೀಪ್ ಕುಮಾರ ಪಾಲ್ಗೊಂಡಿದ್ದರು.
ಅಂಗನವಾಡಿ ಕಾರ್ಯಕರ್ತೆ ರೇಖಾ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.