ಬೀದರ್: ಬಿದರಿ, ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆಯು ಸ್ವಾತಂತ್ರ್ಯದ ಅಮೃತ ಮಹೋತ್ಸದ ಪ್ರಯುಕ್ತ ಆಗಸ್ಟ್ 12ರಿಂದ 14ರ ವರೆಗೆ ಮೂರು ದಿನಗಳ ಕಾಲ ನಡೆಸಲಿರುವ ಬಿದರಿ ಉತ್ಸವ 2022ರಲ್ಲಿ ಕ್ಲಾರಿಯೊನೆಟ್ ವಾದಕ ಪಂಡಿತ್ ನರಸಿಂಹಲು ವಡವಾಟಿ ಅವರಿಗೆ ರಾಜ್ಯ ಮಟ್ಟದ ಬಿದರಿ ದತ್ತಿ ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಿದೆ.
ಬಿದರಿ ಸಾಂಸ್ಕೃತಿಕ ವೇದಿಕೆಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ರಾಯಚೂರು ಜಿಲ್ಲೆಯ ಮೂಲದ ಪಂಡಿತ ನರಸಿಂಹಲು ವಡವಾಟಿ ಅವರು ಕ್ಲಾರಿಯೊನೆಟ್ ಅನ್ನು 50 ವರ್ಷಗಳಿಂದ ನುಡಿಸುತ್ತಿದ್ದಾರೆ. ಜೈಪುರ ಹಾಗೂ ಗ್ವಾಲಿಯರ್ ಘರಾನೆಗೆ ಸೇರಿದ ಇವರು ಅಮೆರಿಕದ ಲಾಸೋನಿಲಿಸ್ ವಿಶ್ವ ವಿದ್ಯಾಲಯ 2011ರಲ್ಲಿ ನಡೆಸಿದ ಅಂತರರಾಷ್ಟ್ರೀಯ ಕ್ಲಾರಿಯೊನೆಟ್ ಸಮ್ಮೇಳನದ ಅಧ್ಯಕ್ಷತೆ ವಹಿಸಿ ರಾಷ್ಟ್ರದ ಕೀರ್ತಿ ಹೆಚ್ಚಿಸಿದವರಾಗಿದ್ದಾರೆ.
ರಾಜ್ಯ ಮಟ್ಟದ ಮೊದಲನೇ ಬಿದರಿ ದತ್ತಿ ಪ್ರಶಸ್ತಿಯನ್ನು ಕಳೆದ ಬಾರಿ ಹಿರಿಯ ಖ್ಯಾತ ಸಂಗೀತಗಾರ ಬೀದರ್ ಜಿಲ್ಲೆಯ ಮೂಲದ ಪಂಡಿತ ವೈಕುಂಠ ದತ್ತ ಮಹಾರಾಜ ಅವರಿಗೆ ಕೊಡಲಾಗಿತ್ತು. ಇದೀಗ ಈ ಎರಡನೇ ವರ್ಷದ ಬಿದರಿ ದತ್ತಿ ಪ್ರಶಸಿ, ₹ 15 ಸಾವಿರ ನಗದು, ಪ್ರಶಸ್ತಿ ಫಲಕ, ಗೌರವ ಸನ್ಮಾನವನ್ನು ಕ್ಲಾರಿಯೊನೆಟ್ ವಾದಕ ಪಂಡಿತ್ ನರಸಿಂಹಲು ವಡವಾಟಿ ಅವರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಬಿದರಿ ವೇದಿಕೆಯ ಅಧ್ಯಕ್ಷೆ ರೇಖಾ ಅಪ್ಪಾರಾವ್ ಸೌದಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.