ADVERTISEMENT

ಕರ್ತವ್ಯ ಲೋಪ: ಹುಲಸೂರ ಪಿಡಿಒ ಅಮಾನತು

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 7:28 IST
Last Updated 2 ನವೆಂಬರ್ 2025, 7:28 IST
ಹುಲಸೂರ ಗ್ರಾಮ ಪಂಚಾಯತ್ ಪಿಡಿಒ ರಮೇಶ್ ಮಿಲಿಂದಕರ
ಹುಲಸೂರ ಗ್ರಾಮ ಪಂಚಾಯತ್ ಪಿಡಿಒ ರಮೇಶ್ ಮಿಲಿಂದಕರ   

ಹುಲಸೂರ: ಸರ್ಕಾರದ ಮಹತ್ವಕಾಂಕ್ಷಿ ಯೋಜನೆ 15ನೇ ಹಣಕಾಸು ಯೋಜನೆ ಮಾರ್ಗಸೂಚಿ ಹಾಗೂ ಕೆಟಿಪಿಪಿ ನಿಯಮ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಹುಲಸೂರ ಪಿಡಿಒ ರಮೇಶ ಮಿಲಿಂದಕರ ಅವರನ್ನು ಸೇವೆಯಿಂದ ಅಮಾನತುಗೊಳಿಸಿ, ಜಿ.ಪಂ ಸಿಇಒ ಡಾ.ಗಿರೀಶ ಬದೋಲೆ ಆದೇಶಿಸಿದ್ದಾರೆ.

ಕಳೆದ ಸಾಲಿನಲ್ಲಿ ನಡೆದ 38 ಕಾಮಗಾರಿಗಳ ಪೈಕಿ, 34 ಕಾಮಗಾರಿಗಳನ್ನು ಗ್ರಾ.ಪಂ ಸದಸ್ಯರ ಗಮನಕ್ಕೆ ತರದೇ, ಸಾಮಾನ್ಯ ಸಭೆ ಹಾಗೂ ತುರ್ತು ಸಭೆಯಲ್ಲಿ ಚರ್ಚಿಸಿಲ್ಲ. ಕಾಮಗಾರಿಗಳಗೆ ತಾಂತ್ರಿಕ ಹಾಗೂ ಆಡಳಿತಾತ್ಮಕ ಅನುಮೋದನೆ ಪಡೆದಿಲ್ಲ. ಆದರೂ ಮನಬಂದಂತೆ ಕ್ರಿಯಾ ಯೋಜನೆ ಸಿದ್ಧಪಡಿಸಿ, ಸದಸ್ಯರಿಗೆ ಮಾಹಿತಿ ನೀಡದೇ ಇ-ಗ್ರಾಮ ಸ್ವರಾಜ್ ತಂತ್ರಾಂಶದಲ್ಲಿ ಅಪಲೋಡ್ ಮಾಡಲಾಗಿದೆ. ಜಿ.ಪಂ ಕಚೇರಿಯಲ್ಲೂ ಪರಿಶೀಲನೆಗೆ ಒಳಪಡಿಸಿಲ್ಲ. ಅಲ್ಲದೆ, ನಗದು ಹಾಗೂ ಸಭೆ ನಡಾವಳಿ ಪುಸ್ತಕ, ದಾಸ್ತಾನು ನಿರ್ವಹಿಸಿಲ್ಲ. ಅಲ್ಲದೆ ಕೆಟಿಟಿಪಿ ಹಾಗೂ ಪಂಚಾಯತ್‌ ಅಧಿನಿಯಮ ಉಲ್ಲಂಘಿಸಿರುವುದು, ಅನುದಾನ ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಜಂಟಿ ಪರಿಶೀಲನೆ ವರದಿಯಲ್ಲಿ ತಿಳಿಸಿದ್ದಾರೆ.

ಕರ್ತವ್ಯ ಲೋಪವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಅವರ ವಿರುದ್ಧ ಕ್ರಮ ಜರುಗಿಸಲು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯಿತಿ ಸಿಇಒಗೆ ವರದಿ ಸಲ್ಲಿಸಿದ್ದರು. ಪಿಡಿಒ ವಿರುದ್ಧ ಇಲಾಖೆ ವಿಚಾರಣೆ ಕಾಯ್ದಿರಿಸಿ, ಕರ್ನಾಟಕ ನಾಗರಿಕ ಸೇವಾ ನಿಯಮದಡಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.

ADVERTISEMENT