ಹುಲಸೂರ: ‘ಪ್ರಾಂಜಲ ಮನಸ್ಸಿನ ಸಮರ್ಪಣಾ ಭಾವದ ಪರಿಪೂರ್ಣ ಪ್ರೀತಿಯೇ ಭಕ್ತಿಯಾಗಿ ರೂಪುಗೊಳ್ಳುತ್ತದೆ. ಇದುವೇ ಭಗವಂತನಿಗೆ ಅರ್ಪಿಸುವ ನಿಜವಾದ ನೈವೇದ್ಯವಾಗಿದೆ’ ಎಂದು ಹಾರಕೂಡದ ಚನ್ನವೀರ ಶಿವಾಚಾರ್ಯರು ನುಡಿದರು.
ತಾಲ್ಲೂಕಿನಲ್ಲಿ ಹಾಲಹಳ್ಳಿ ಗ್ರಾಮದಲ್ಲಿ ನಡೆದ ವಿಠಲ ರುಕ್ಮಿಣಿ ದೇವಸ್ಥಾನದ ಕಳಸಾರೋಹಣ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
‘ಶ್ರದ್ಧೆ, ನಿಷ್ಠೆಯಿಂದ ಕೂಡಿದ ದೈವಭಕ್ತಿಗೆ ವಿಠಲನ ಅನುಗ್ರಹ ಹರಿದು ಬರುತ್ತದೆ. ದೇವನೊಲುಮೆಯ ಕಕ್ಷೆಗೆ ಸೇರಿದವರು ನಿಶ್ಚಿಂತರಾಗಿ ಬದುಕುತ್ತಾರೆ. ಅಂತಹವರಿಗೆ ಕಷ್ಟ ಸುಖಗಳೆರಡೂ ಬೇರೆಯಾಗಿ ಕಾಣದೆ ಎಲ್ಲವೂ ದೇವರ ಪ್ರಸಾದವೆಂದು ಭಾವಿಸಿ ಸಮಚಿತ್ತದಿಂದ ಬಾಳುತ್ತಾರೆ’ ಎಂದರು.
‘ವಿಠಲ ರುಕ್ಮಿಣಿ ಮಂದಿರ ನಮ್ಮ ಭವ್ಯ ಪರಂಪರೆಯ ಆದರ್ಶ ಗ್ರಹಸ್ಥ ಜೀವನದ ಪ್ರತೀಕವಾಗಿದ್ದು, ಕೌಟುಂಬಿಕ ಮೌಲ್ಯಗಳ ಧಾರಣೆಗೆ ಸ್ಪೂರ್ತಿಯ ಕೇಂದ್ರವಾಗಲಿ ಎಂಬುವುದು ದೊಡ್ಡ ಆಶಯ’ ಎಂದು ಹೇಳಿದರು.
ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿ ಸಾವಿತ್ರಿ ಶರಣು ಸಲಗರ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಿಕೆಪಿಎಸ್ ಸಹಕಾರ ಸಂಘದ ನಿರ್ದೇಶಕ ಶಂಕ್ರೆಪ್ಪ ಪಾಟೀಲ, ಪ್ರಮುಖರಾದ ಮಲ್ಲಿಕಾರ್ಜುನ ಪಾಟೀಲ, ನೀಲಕಂಠ ಕಾಳೆ, ಶ್ರೀಶೈಲ ಪಾಟೀಲ, ಸಂತೋಷ ಕಾಳೆ, ಗುಂಡೆರಾವ ದೇವಕರೆ, ದಯಾನಂದ ಬಿರಾದಾರ, ದಯಾನಂದ ಪಾಟೀಲ್, ಗಣೇಶ ಪಾಟೀಲ ಹಾಜರಿದ್ದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನೆ ಗೀತೆ ಹಾಡಿದರು. ಡಿಸಿ ಪಾಟೀಲ್ ಸ್ವಾಗತಿಸಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.