ADVERTISEMENT

ಬೀದರ್: ಪ್ರಧಾನಿ ಭದ್ರತೆ ಲೋಪ ಖಂಡಿಸಿ ಪಂಜಿನ ಮೆರವಣಿಗೆ

ಪಂಜಾಬ್ ಕಾಂಗ್ರೆಸ್ ಸರ್ಕಾರ ವಜಾಕ್ಕೆ ಬಿಜೆಪಿ ಯುವ ಮೋರ್ಚಾ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 12:49 IST
Last Updated 7 ಜನವರಿ 2022, 12:49 IST
ಪ್ರಧಾನಿಗೆ ಸೂಕ್ತ ರಕ್ಷಣೆ ನೀಡದ ಪಂಜಾಬ್‍ನ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಬೀದರ್‍ನಲ್ಲಿ ಪಂಜಿನ ಮೆರವಣಿಗೆ ನಡೆಸಿದರು
ಪ್ರಧಾನಿಗೆ ಸೂಕ್ತ ರಕ್ಷಣೆ ನೀಡದ ಪಂಜಾಬ್‍ನ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಬೀದರ್‍ನಲ್ಲಿ ಪಂಜಿನ ಮೆರವಣಿಗೆ ನಡೆಸಿದರು   

ಬೀದರ್: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೂಕ್ತ ಭದ್ರತೆ ಒದಗಿಸದ ಪಂಜಾಬ್‍ನ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿದರು.

ತೋಟಗಾರಿಕೆ ಕಚೇರಿ ಬಳಿಯಿಂದ ಪಂಜಿನ ಮೆರವಣಿಗೆಯಲ್ಲಿ ಡಾ. ಅಂಬೇಡ್ಕರ್ ವೃತ್ತಕ್ಕೆ ಬಂದು ಪಂಜಾಬ್ ಮುಖ್ಯಮಂತ್ರಿ ಚರಣಜೀತ್‍ಸಿಂಗ್ ಚಿನ್ನಿ ಅವರ ಪ್ರತಿಕೃತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಪಂಜಾಬ್ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ರಾಷ್ಟ್ರಪತಿಗಳು ಕೂಡಲೇ ಪಂಜಾಬ್ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಶೇಕಾಪುರ ಮಾತನಾಡಿ, ಪಂಜಾಬ್‍ನಲ್ಲಿ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆಗೆ ತೆರಳುತ್ತಿದ್ದ ವೇಳೆ ಪ್ರಧಾನಿಗೆ ಸೂಕ್ತ ಭದ್ರತೆ ನೀಡದೇ ಇರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಹೇಳಿದರು.

ಪ್ರಧಾನಿ ಭೇಟಿ ವೇಳೆ ಭದ್ರತೆ ಒದಗಿಸುವುದು ಆಯಾ ರಾಜ್ಯ ಸರ್ಕಾರಗಳ ಕರ್ತವ್ಯವಾಗಿದೆ. ಆದರೆ, ಪಂಜಾಬ್ ಸರ್ಕಾರ ಭದ್ರತೆ ಲೋಪ ಎಸಗಿದೆ. ಪ್ರಧಾನಿ ಅವರನ್ನು 20 ನಿಮಿಷ ರಸ್ತೆಯಲ್ಲಿ ನಿಲ್ಲಿಸಿದ್ದು ತೀವ್ರ ಖಂಡನೀಯವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿ ಪ್ರಧಾನಿಗೆ ಅಗೌರವ ತೋರಿದೆ. ಮೋದಿ ಅವರ ಪ್ರಾಣಕ್ಕೆ ಸಂಚಕಾರ ತರುವ ರೀತಿಯಲ್ಲಿ ವರ್ತಿಸಿದೆ. ರಾಷ್ಟ್ರಪತಿಗಳು ಕೂಡಲೇ ಪಂಜಾಬ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಆಗ್ರಹಿಸಿದರು.

ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅರಹಂತ ಸಾವಳೆ, ಕಾರ್ಯದರ್ಶಿ ಕಿರಣ ಪಾಟೀಲ, ನಗರ ಮಂಡಲ ಅಧ್ಯಕ್ಷ ಹಣಮಂತ ಬುಳ್ಳಾ, ನಗರಸಭೆ ಸದಸ್ಯರಾದ ರಾಜಾರಾಮ ಚಿಟ್ಟಾ, ಶಶಿಧರ ಹೊಸಳ್ಳಿ, ಮುಖಂಡರಾದ ಎನ್.ಆರ್. ವರ್ಮಾ, ವಿಕ್ರಮ ಮುದಾಳೆ, ಮಹೇಶ್ವರ ಸ್ವಾಮಿ, ಸಂಗಮೇಶ ಹುಮನಾಬಾದೆ, ಅನಿಲ್ ರಾಜಗೀರಾ, ವೀರೇಶ ಸ್ವಾಮಿ, ಸಂತೋಷ ಶೆಡೋಳೆ, ಪವನ್ ಉಂಡೆ, ಮಹೇಶ ವಿಶ್ವಕರ್ಮ, ಸಂಜಯ್ ಜೀರಗೆ, ಸತೀಶ ಶಟಗೊಂಡೆ, ತಾನಾಜಿ ಸಾಗರ, ಶಿವಾ ಸುಲ್ತಾನಪುರೆ, ಶರಣು ಬಿರಾದಾರ, ವಿಶಾಲ್ ಅತಿವಾಳೆ, ಯುವ ಮೋರ್ಚಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಯುವ ಮೋರ್ಚಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.