ಬಸವಣ್ಣನವರ ಪುತ್ಥಳಿ
ಭಾಲ್ಕಿ (ಬೀದರ್ ಜಿಲ್ಲೆ): ಕಬ್ಬು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ತಗುಲಿದ ಪರಿಣಾಮ ತಾಲ್ಲೂಕಿನ ದಾಡಗಿ ಕ್ರಾಸ್ ಸಮೀಪದ ಬಸವಣ್ಣನವರ ಪುತ್ಥಳಿ ವಿರೂಪಗೊಂಡಿತ್ತು. ಘಟನೆ ಸಂಬಂಧ ಟ್ರ್ಯಾಕ್ಟರ್ ಚಾಲಕನನ್ನು ಬಂಧಿಸಲಾಗಿದೆ ಎಂದು ಖಟಕಚಿಂಚೋಳಿ ಪಿಎಸ್ಐ ಸುದರ್ಶನ ರೆಡ್ಡಿ ತಿಳಿಸಿದ್ದಾರೆ.
ಸಿಸಿಟಿವಿ ಕ್ಯಾಮೆರಾ ದೃಶ್ಯ ಗಳನ್ನು ಪರೀಶೀಲಿಸಿದಾಗ ಅಂದು ಮಧ್ಯರಾತ್ರಿ ಆ ಮಾರ್ಗವಾಗಿ
ಘೋಡವಾಡಿಯಿಂದ ಕಬ್ಬು ತೆಗೆದುಕೊಂಡು ಉದಗೀರ್ ಕಡೆಗೆ ಒಂದೇ ಟ್ರ್ಯಾಕ್ಟರ್ ಸಾಗಿತ್ತು. ಈ ಟ್ರ್ಯಾಕ್ಟರ್ ತೆರಳಿದ ಸಂಪೂರ್ಣ ಮಾಹಿತಿ ಕಲೆ ಹಾಕಿದಾಗ, ಉದಗೀರ್ ನ ವಿಲಾಸ ಶುಗರ್ ಫ್ಯಾಕ್ಟರಿಯಲ್ಲಿ ಟ್ರ್ಯಾಕ್ಟರ್ ಪತ್ತೆಯಾಗಿದೆ. ಚಾಲಕನನ್ನು ವಿಚಾರಣೆಗೆ ಒಳಪಡಿಸಿದಾಗ ತನ್ನ ನಿರ್ಲಕ್ಷ್ಯದಿಂದಲೇ ಪುತ್ಥಳಿ ವಿರೂಪಗೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ರೆಡ್ಡಿ ಸೋಮವಾರ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಖಟಕ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜನವರಿ 14ರಂದು ಬಸವಣ್ಣನ ಪುತ್ಥಳಿಯ ಬಲಗೈ ತುಂಡರಿಸಿ ಬಿದ್ದಿತ್ತು. ಷಟಸ್ಥಲ ಧ್ವಜ ಬೀಳಿಸಿ ವಿರೂಪಗೊಂಡಿತ್ತು. ಘಟನೆ ಬಳಿಕ ಭಾಲ್ಕಿ-ಹುಮನಾಬಾದ್ ಮುಖ್ಯರಸ್ತೆಯಲ್ಲಿ ರಸ್ತೆತಡೆ ನಡೆಸಲಾಗಿತ್ತು. ಬಸವಪರ ಸಂಘಟನೆಗಳು ಘಟನೆಯನ್ನು ವಿರೋಧಿಸಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.