ADVERTISEMENT

ಕೈಗೆ ಕೆಲಸವಿಲ್ಲದಾಗ ಬೆಲೆ ಏರಿಕೆ ಸರಿಯಲ್ಲ

ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾಲಾ ಬಿ.ನಾರಾಯಣರಾವ್ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 5:27 IST
Last Updated 18 ಜೂನ್ 2021, 5:27 IST
ಬಸವಕಲ್ಯಾಣದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದಿಂದ ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಮಾಲಾ ಬಿ.ನಾರಾಯಣರಾವ್, ಅರ್ಜುನ ಕನಕ ಪಾಲ್ಗೊಂಡಿದ್ದರು
ಬಸವಕಲ್ಯಾಣದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದಿಂದ ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಮಾಲಾ ಬಿ.ನಾರಾಯಣರಾವ್, ಅರ್ಜುನ ಕನಕ ಪಾಲ್ಗೊಂಡಿದ್ದರು   

ಬಸವಕಲ್ಯಾಣ: ‘ಕೋವಿಡ್ ಲಾಕ್‌ಡೌನ್‌ ಕಾರಣ ಅನೇಕರು ಕೈಗೆ ಕೆಲಸವಿಲ್ಲದೆ ಚಿಂತಿತರಾಗಿ ಮನೆಯಲ್ಲಿ ಕುಳಿತಿರುವಾಗ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದು ನ್ಯಾಯವಲ್ಲ’ ಎಂದು ಕಾಂಗ್ರೆಸ್‌ನ ಮಾಲಾ ಬಿ.ನಾರಾಯಣರಾವ್ ಆಕ್ರೋಶ ವ್ಯಕ್ತಪಡಿಸಿದರು.

ಸಮೀಪದ ರಾಷ್ಟ್ರೀಯ ಹೆದ್ದಾರಿ ಯಲ್ಲಿನ ಪೆಟ್ರೋಲ್ ಪಂಪ್ ಎದುರು ಗುರುವಾರ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಎರಡು ವರ್ಷಗಳಿಂದ ಸತತವಾಗಿ ಕೋವಿಡ್ ಕಾಡುತ್ತಿರುವ ಕಾರಣ ದೇಶದಲ್ಲಿನ ವ್ಯಾಪಾರ, ಉದ್ಯೋಗ ಬಂದ್ ಆಗಿದೆ. ಹೀಗಾಗಿ ಕೆಲಸವಿಲ್ಲದೆ ಅನೇಕರು ಆರ್ಥಿಕವಾಗಿ ದುಸ್ಥಿತಿಗೆ ತಲುಪಿದ್ದಾರೆ. ಹೊಟ್ಟೆಗೆ ತುತ್ತು ಅನ್ನವೂ ಸಿಗದಂತಾಗಿದೆ. ಮಹಿಳೆಯ ಹೆಸರಲ್ಲಿ ಅಡುಗೆ ಅನಿಲ ವಿತರಿಸಿ ಈಗ ಬೆಲೆ ಏರಿಕೆ ಮಾಡಿ ಅವರನ್ನು ಸಂಕಟಕ್ಕೆ ದೂಡಲಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗಿದ್ದರಿಂದ ವ್ಯಾಪಾರಿಗಳು, ನೌಕರಸ್ಥರಿಗೆ ಅಷ್ಟೇ ಅಲ್ಲ; ಹೊಲ, ಗದ್ದೆಗಳಿಗೆ ವಾಹನಗಳನ್ನು ತೆಗೆದುಕೊಂಡು ಹೋಗುವ ರೈತರಿಗೆ ತೊಂದರೆಯಾಗಿದೆ. ಆದ್ದರಿಂದ ಶೀಘ್ರ ಬೆಲೆ ಇಳಿಕೆಯಾಗಬೇಕು’ ಎಂದು ಆಗ್ರಹಿಸಿದರು.

ADVERTISEMENT

ಹಿರಿಯ ಮುಖಂಡ ಅರ್ಜುನ ಕನಕ ಮಾತನಾಡಿ, ‘ಮನಮೋಹನಸಿಂಗ್ ಅವರು ಪ‍್ರಧಾನಿ ಆಗಿದ್ದಾಗ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಯಾರಿಗೂ ಹೊರೆ ಆಗದಂತಿತ್ತು. ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯನವರು ಬಡವರಿಗೆ 10 ಕೆ.ಜಿ ಅಕ್ಕಿ ವಿತರಿಸುತ್ತಿದ್ದರು. ಈಗ ಬರೀ 5 ಕೆ.ಜಿ ಅಕ್ಕಿ ಕೊಡಲಾಗುತ್ತಿದೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯದಲ್ಲಿನ ಬಿಜೆಪಿ ಸರ್ಕಾರವನ್ನು ಎಲ್ಲರೂ ಧಿಕ್ಕರಿಸಬೇಕಾಗಿದೆ’ ಎಂದರು.

ಪಕ್ಷದ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಶಂಕರರಾವ್ ಜಮಾದಾರ ಮಾತನಾಡಿ, ‘ಪ್ರಧಾನಮಂತ್ರಿ ಮೋದಿ ಬಡವರ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. 7 ವರ್ಷದ ಹಿಂದೆ ಎಲ್ಲ ಬೆಲೆಗಳನ್ನು ಕಡಿಮೆ ಮಾಡುವ ಭರವಸೆ ನೀಡಿದ್ದರು. ಆ ಭರವಸೆಗಳು ಈಗ ಹುಸಿಯಾಗಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಶಿವರಾಜ ನರಶೆಟ್ಟಿ, ದಿಲೀಪ ಶಿಂಧೆ, ಯುವರಾಜ ಭೆಂಡೆ, ಪೃಥ್ವಿಗಿರಿ ಗೋಸಾಯಿ, ಗೌತಮ ಬಿ.ನಾರಾಯಣರಾವ್, ರೈಸೊದ್ದೀನ್, ಸುರೇಶ ಮೋರೆ, ಅಶೋಕ ಢಗಳೆ, ಗಫೂರ ಪೇಶಮಾಮ್, ಶಹಾಜಹಾನಾ ಬೇಗಂ, ಶಿವರಾಜ ಮದನಸೂರೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.