ADVERTISEMENT

ಸುರಕ್ಷಿತ ವಾಹನ ಚಾಲನೆಗೆ ಆದ್ಯತೆ ನೀಡಿ: ಮಲ್ಲಿಕಾರ್ಜುನ ಅಂಬಲಿ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 1:41 IST
Last Updated 11 ಫೆಬ್ರುವರಿ 2021, 1:41 IST
ಭಾಲ್ಕಿಯಲ್ಲಿ ಸಾರಿಗೆ ಮತ್ತು ಪೋಲಿಸ್ ಇಲಾಖೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಹೆ ಸಮಾರೋಪ ಸಮಾರಂಭದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶ ಮಲ್ಲಿಕಾರ್ಜುನ ಅಂಬಲಿ ಪಾಲ್ಗೊಂಡಿದ್ದರು
ಭಾಲ್ಕಿಯಲ್ಲಿ ಸಾರಿಗೆ ಮತ್ತು ಪೋಲಿಸ್ ಇಲಾಖೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಹೆ ಸಮಾರೋಪ ಸಮಾರಂಭದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶ ಮಲ್ಲಿಕಾರ್ಜುನ ಅಂಬಲಿ ಪಾಲ್ಗೊಂಡಿದ್ದರು   

ಭಾಲ್ಕಿ: ‘ಅಪಘಾತ ರಹಿತ ವಾಹನ ಚಾಲನೆಗಾಗಿ ಪ್ರತಿಯೊಬ್ಬರೂ ರಸ್ತೆ ನಿಯಮ ಪಾಲನೆ, ಸುರಕ್ಷಿತ ವಾಹನ ಚಾಲನೆಗೆ ಪ್ರಥಮಾದ್ಯತೆ ನೀಡಬೇಕು’ ಎಂದು ಹಿರಿಯ ಶ್ರೇಣಿ ನ್ಯಾಯಧೀಶ ಮಲ್ಲಿಕಾರ್ಜುನ ಅಂಬಲಿ ಸಲಹೆ ನೀಡಿದರು.

ಇಲ್ಲಿನ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಹೆ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಸಾರಿಗೆ ಇಲಾಖೆಯವರ ರಸ್ತೆ ಸುರಕ್ಷತೆ ಜೀವದ ರಕ್ಷೆ ಎಂಬ ಧ್ಯೇಯವಾಕ್ಯವನ್ನು ಎಲ್ಲರೂ ಅರಿಯಬೇಕು. ಇತ್ತೀಚೆಗೆ ದೇಶದಲ್ಲಿ ಅಪಘಾತದಲ್ಲಿ ಮರಣ ಹೊಂದುವವರ ಸಂಖ್ಯೆ ದಿನೇ ದಿನೇ ಹೆಚ್ಚಲು ವಾಹನ ಚಾಲಕರ ನಿರ್ಲಕ್ಷ್ಯವೇ ಕಾರಣವಾಗುತ್ತಿದೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಕಾರ್ಯ ಎಲ್ಲರಿಂದ ನಡೆಯಬೇಕು. ಇಂದು ರಸ್ತೆ ಬಳಕೆದಾರರಿಗೆ ಶಿಕ್ಷಣ ಮತ್ತು ತರಬೇತಿ ನೀಡಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ’ ಎಂದು ಹೇಳಿದರು.

ADVERTISEMENT

ಡಿವೈಎಸ್ಪಿ ಡಾ.ದೇವರಾಜ ಬಿ.ಮಾತನಾಡಿ, ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಬಗ್ಗೆ ಶಿಕ್ಷಣ ನೀಡುವುದು ಅಗತ್ಯವಾಗಿದೆ. ಅನಾಹುತಗಳನ್ನು ತಪ್ಪಿಸಲು ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ತಿಳಿದುಕೊಂಡಿರಬೇಕು. ಶಾಲಾ ಮಕ್ಕಳನ್ನು ಹೊತ್ತೊಯ್ಯುವ ವಾಹನ ಚಾಲಕರು ಹೆಚ್ಚು ಜಾಗರೂಕತೆ ವಹಿಸಬೇಕು. ಪಾಲಕರು ಸಣ್ಣ ವಯಸ್ಸಿನ ಮಕ್ಕಳಿಗೆ ವಾಹನಗಳ ಕೀ ಕೊಡಬೇಡಿ’ ಎಂದು ಹೇಳಿ, ಮಾರ್ಗ ಸೂಚಿಗಳನ್ನೊಳಗೊಂಡ ಸ್ವರಚಿತ ಕವನಗಳನ್ನು ವಾಚಿಸಿ ಯುವಕರಿಗೆ ಸಾರಿಗೆ ನಿಯಮಗಳನ್ನು ಮನದಟ್ಟು ಮಾಡಿದ್ದು ವಿಶೇಷವಾಗಿತ್ತು.

ಮೋಟಾರು ವಾಹನ ನಿರೀಕ್ಷಕರಾದ ಜಾಫರ್ ಸಾದಿಕ್ ಮಾತನಾಡಿ, ಯುವಕರ ಬೇಜವಾಬ್ದಾರಿತನದಿಂದ ದ್ವಿಚಕ್ರ ವಾಹನಗಳು ಅಧಿಕ ಪ್ರಮಾಣದಲ್ಲಿ ಅಪಘಾತಕೊಳಗಾಗುತ್ತಿವೆ ಎಂದು ಹೇಳಿ, ಪ್ರಾಯೋಗಿಕವಾಗಿ ರಸ್ತೆ ಚಿಹ್ನೆಗಳ ಮಾಹಿತಿ ನೀಡಿ ಗಮನ ಸೆಳೆದರು.

ಹೆಲ್ಮೆಟ್ ವಿತರಣೆ: ಇದೇ ಸಮಾರಂಭದಲ್ಲಿ ಸಭೆಯಲ್ಲಿದ್ದವರಿಗೆ ಸಾರಿಗೆ ಇಲಾಖೆ ವತಿಯಿಂದ ಹೆಲ್ಮೆಟ್ ವಿತರಿಸಲಾಯಿತು.

ಎಆರ್‌ಟಿಒ ಸುರೇಶ ಶ್ರೀಮಂಡಲ್, ಗ್ರೇಡ್-2 ತಹಶೀಲ್ದಾರ್ ಮಲ್ಲಿಕಾರ್ಜುನ, ಪ್ರಾಚಾರ್ಯರಾದ ಸೂರ್ಯಕಾಂತ ಧನ್ನೆ, ಅಶೋಕ ರಾಜೋಳೆ, ಸುಭಾಷ ಪೂಜಾರಿ, ಸಾಯಿರಾಜ ಮೋಟರ್ ಡ್ರೈವಿಂಗ್ ಸ್ಕೂಲ್‍ನ ರಾಜಶೇಖರ ಬಿರಾದಾರ, ನಾಥೆ ಡ್ರೈವಿಂಗ್ ಸ್ಕೂಲ್‍ನ ರಾಜಶೇಖರ ನಾಥೆ, ವೀರಭದ್ರೇಶ್ವರ ಡ್ರೈವಿಂಗ್ ಸ್ಕೂಲ್‍ನ ಪರಮೇಶ್ವರ ಮತ್ತು ಕಚೇರಿ ಸಿಬ್ಬಂದಿ ಮಲ್ಲಿಕಾರ್ಜುನ, ಹಣಮಂತ, ಮುರಾರಿ, ರಶೀದ್‌ ಭಾಗವಹಿಸಿದ್ದರು.

ಮೋಟಾರು ವಾಹನ ನಿರೀಕ್ಷಕ ಸುರೇಶ ಕಾಜಗಾರ ಸ್ವಾಗತಿಸಿದರು. ಬಿ.ಕೆ.ಮಹಾದೇವ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.