ADVERTISEMENT

ಕಲ್ಯಾಣದ ಐತಿಹಾಸಿಕ ಕುರುಹು ರಕ್ಷಿಸಿ: ಅಬ್ದುಲ್ ಮಾಜೀದ್ ಮಣಿಯಾರ್

ಪ್ರಾಧ್ಯಾಪಕ ಅಬ್ದುಲ್ ಮಾಜೀದ್ ಮಣಿಯಾರ್ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 4:32 IST
Last Updated 19 ಏಪ್ರಿಲ್ 2021, 4:32 IST
ಬಸವಕಲ್ಯಾಣದಲ್ಲಿ ಭಾನುವಾರ ಲಿಗಾಡೆ ಪ್ರತಿಷ್ಠಾನದಿಂದ ನಡೆದ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಕುರಿತಾದ ಉಪನ್ಯಾಸದಲ್ಲಿ ತಹಶೀಲ್ದಾರ್ ಮೀನಾಕುಮಾರಿ ಬೋರಾಳಕರ್ ಅವರನ್ನು ಸನ್ಮಾನಿಸಲಾಯಿತು
ಬಸವಕಲ್ಯಾಣದಲ್ಲಿ ಭಾನುವಾರ ಲಿಗಾಡೆ ಪ್ರತಿಷ್ಠಾನದಿಂದ ನಡೆದ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಕುರಿತಾದ ಉಪನ್ಯಾಸದಲ್ಲಿ ತಹಶೀಲ್ದಾರ್ ಮೀನಾಕುಮಾರಿ ಬೋರಾಳಕರ್ ಅವರನ್ನು ಸನ್ಮಾನಿಸಲಾಯಿತು   

ಬಸವಕಲ್ಯಾಣ: ‘ಕಲ್ಯಾಣದ ಐತಿಹಾಸಿಕ ಕುರುಹುಗಳ ಸಂರಕ್ಷಣೆ ಆಗಲಿ. ಈ ನೆಲದ ಮಹತ್ವ ಜಗತ್ತಿಗೆ ಗೊತ್ತಾಗಲಿ’ ಎಂದು ಸಹಾಯಕ ಪ್ರಾಧ್ಯಾಪಕ ಅಬ್ದುಲ್ ಮಾಜೀದ್ ಮಣಿಯಾರ್ ಹೇಳಿದರು.

ನಗರದ ಕೋಟೆಯಲ್ಲಿ ಭಾನುವಾರ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರ್ಗಿಯ ಇತಿಹಾಸ ವಿಭಾಗ ಹಾಗೂ ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ವಿಶ್ವ ಪರಂಪರೆ ದಿನದ ಅಂಗವಾಗಿ ಆಯೋಜಿಸಿದ್ದ ಪ್ರಾಚೀನ ಸ್ಮಾರಕಗಳ ಸಂಕಥನ ಹಾಗೂ ಸಂರಕ್ಷಣೆ ಕುರಿತಾದ 55ನೇ ಉಪನ್ಯಾಸದಲ್ಲಿ ಅವರು ಮಾತನಾಡಿದರು.

‘ಈ ಸ್ಥಳಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಅನೇಕ ಅರಸು ಮನೆತನಗಳು ಇಲ್ಲಿ ಆಳ್ವಿಕೆ ನಡೆಸಿವೆ. ಬಸವಾದಿ ಶರಣರ, ಸೂಫಿಗಳ, ಸಂತರ ಪಾದಸ್ಪರ್ಶದಿಂದಲೂ ಇದು ಚೈತನ್ಯ ಪಡೆದಿತ್ತು. ಸಮನ್ವಯತೆ, ಸಹಬಾಳ್ವೆಯ ಕೇಂದ್ರವಾದ ಇದು ಬಹುತ್ವದ ಸತ್ವ ಹೊಂದಿದೆ. ಇಲ್ಲಿನ ಕೋಟೆ ಹಾಗೂ ಇತರೆಡೆ ಉತ್ಖನನ, ಸಂಶೋಧನೆ ನಡೆದರೆ ಇನ್ನಷ್ಟು, ಮತ್ತಷ್ಟು ಮಾಹಿತಿ ಬೆಳಕಿಗೆ ಬರಬಲ್ಲದು’ ಎಂದರು.

ADVERTISEMENT

ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ತಹಶೀಲ್ದಾರ್ ಮೀನಾಕುಮಾರಿ ಬೋರಾಳಕರ್ ಮಾತನಾಡಿದರು.

ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮಹ್ಮದ್ ಮೌಸೀನ್ ಖಾನ್ ಮಾತನಾಡಿ, ‘ಕಲ್ಯಾಣದ ಕೋಟೆ ಚಾಲುಕ್ಯ ಅರಸರಿಂದ ಕಟ್ಟಲ್ಪಟ್ಟು ಹೈದರಾಬಾದ್ ನಿಜಾಂ ಅರಸರ ತನಕ ಇಲ್ಲಿ ನಡೆದ ಅನೇಕರ ಆಳ್ವಿಕೆಗೆ ಸಾಕ್ಷಿಯಾಗಿದೆ. ಅನೇಕ ಸಲ ದಾಳಿಗೆ ಒಳಪಟ್ಟು ರೂಪಾಂತರಗೊಂಡಿದೆ. ಕೋಟೆಯ ಚರಿತ್ರೆ, ಶಿಲ್ಪಕಲಾ ವೈಭವ ಹಾಗೂ ರಚನಾ ವಿಧಾನಗಳ ಬಗ್ಗೆ ಸವಿಸ್ತಾರವಾಗಿ ಪರಿಚಯಿಸುವ ಅಗತ್ಯವಿದೆ’ ಎಂದರು.

ಚಂದ್ರಕಾಂತ ಅಕ್ಕಣ್ಣ, ಡಾ.ಭೀಮಾಶಂಕರ ಬಿರಾದಾರ, ದೇವೇಂದ್ರ ಬರಗಾಲೆ, ಡಾ.ಶಿವಾಜಿ ಮೇತ್ರೆ ಮಾತನಾಡಿದರು.

ಹೈದರಾಬಾದ್ ಮೌಲಾನಾ ಆಜಾದ್ ರಾಷ್ಟ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮುಜಮಿಲ್ ಖಾದ್ರಿ, ತಹಶೀಲ್ದಾರ್ ಮೌಸೀನ್ ಅಹ್ಮದ್, ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ.ಹುಡೇದ್, ನಾಗಪ್ಪ ನಿಣ್ಣೆ, ಪ್ರಕೃತಿ ಬೋರಾಳಕರ್, ಮಹ್ಮದ್ ಅಲಿ ಖಾನ್ ಶೇರ್ ಅಲಿ, ಬಷೀರ್ ಅಹ್ಮದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.