ಭಾಲ್ಕಿ: ಪಟ್ಟಣದಲ್ಲಿ ಮಾದಿಗ ಸಮಾಜಕ್ಕೆ 4 ಎಕರೆ ಜಮೀನು ಸ್ಮಶಾನ ಭೂಮಿ ಮಂಜೂರಾತಿ ಮಾಡುವಂತೆ ಮಾದಿಗ ದಂಡೋರ(ಮಾದಿಗ ಮೀಸಲಾತಿ ಹೋರಾಟ ಸಮಿತಿ) ತಾಲ್ಲೂಕು ಘಟಕ ಒತ್ತಾಯ ಮಾಡಿದೆ.
ಈ ಕುರಿತು ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಾದಿಗ ದಂಡೋರ ಸಮಾಜದ ತಾಲ್ಲೂಕು ಅಧ್ಯಕ್ಷ ದತ್ತಾತ್ರಿ ಜ್ಯೋತಿ ನೇತೃತ್ವದಲ್ಲಿ ಶುಕ್ರವಾರ ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
ಸಮಾಜದ ಜನ ಕಳೆದ ಸುಮಾರು 50-60 ವರ್ಷಗಳಿಂದ ಸರ್ವೇ ನಂ.411/*/1 ರ ಜಮೀನಿನಲ್ಲಿ ಶವ ಸಂಸ್ಕಾರ ಮಾಡಿಕೊಂಡು ಬರತ್ತಿದ್ದಾರೆ. ಸುಮಾರು 2700 ಜನಸಂಖ್ಯೆ ಹೊಂದಿರುವ ಮಾದಿಗ ಸಮಾಜಕ್ಕೆ ಕೇವಲ 1 ಎಕರೆ ಸ್ಮಶಾನ ಭೂಮಿ ಗುರುತಿಸಲಾಗಿದ್ದು ಅದೂ ಕೂಡ ತಗ್ಗುದಿನ್ನೆಗಳಿಂದ ಕೂಡಿದೆ.
ಚರಂಡಿ ನೀರು ಸ್ಮಶಾನ ಭೂಮಿಗೆ ಸೇರುತ್ತಿರುವುದರಿಂದ ಶವ ಸಂಸ್ಕಾರಕ್ಕೆ ತೊಂದರೆಯಾಗುತ್ತಿದೆ. ಕೂಡಲೇ ಅಧಿಕಾರಿಗಳು ಮಾದಿಗ ಸಮಾಜದ ಜನಸಂಖ್ಯೆ ಆಧರಿಸಿ 4 ಎಕರೆ ಜಮೀನು ಮಾದಿಗ ಸಮಾಜದ ಸ್ಮಶಾನಕ್ಕೆ ಗುರುತಿಸಿ ಕೊಡಬೇಕು. ವಿಳಂಬ ಮಾಡಿದರೆ ಬರುವ ದಿನಗಳಲ್ಲಿ ಅನಿರ್ದಿಷ್ಟಾವಧಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.
ಪ್ರಮುಖರಾದ ದೇವಿದಾಸ ರೇಷ್ಮೆ, ಸಂಜುಕುಮಾರ ಮೇತ್ರೆ, ರಾಜಶೇಖರ ರೇಷ್ಮೆ, ರಾಹುಲ್ ಮೇತ್ರೆ, ಸಿಮನ್ ಹಾಲೇಪುರ್ಗೆ, ಅರುಣ ರೇಷ್ಮೆ, ಶಾಮರಾವ್ ಥಮಗ್ಯಾಳೆ, ಮಹೇಶ್, ಗುಂಡಮ್ಮ ದುಬಲಗುಂಡೆ
ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.