ಬೀದರ್ನ ಜನವಾಡ ರಸ್ತೆಯ ಡಾ.ಬಿ.ಆರ್. ಅಂಬೇಡ್ಕರ್ ಹಾಸ್ಟೆಲ್ ಆವರಣದಲ್ಲಿ ಮಂಗಳವಾರ ಅಪಾರ ನೀರು ಸಂಗ್ರಹಗೊಂಡಿತು
ಬೀದರ್: ಜೂನ್ ಸಂಪೂರ್ಣ ತಿಂಗಳು ಹಾಗೂ ಜುಲೈ ಎರಡನೇ ವಾರದ ವರೆಗೆ ಮಳೆ ಇಲ್ಲದೆ ಚಿಂತಾಕ್ರಾಂತರಾಗಿದ್ದ ರೈತರ ಚಿಂತೆ ಈಗ ದೂರವಾಗಿದೆ.
ನಾಲ್ಕೈದು ದಿನಗಳಿಂದ ಜಿಲ್ಲೆಯಾದ್ಯಂತ ಮಳೆ ಚುರುಕಾಗಿದ್ದು, ಒಣಗುವ ಹಂತಕ್ಕೆ ಬಂದಿದ್ದ ಬೆಳೆಗೆ ಜೀವಾಮೃತ ಸಿಕ್ಕಂತಾಗಿದೆ.
ಸೋಮವಾರ ರಾತ್ರಿ ಹಾಗೂ ಮಂಗಳವಾರವೂ ಹಲವೆಡೆ ಉತ್ತಮ ವರ್ಷಧಾರೆಯಾಗಿದೆ. ಸೋಮವಾರ ಸಂಜೆಯಿಂದ ರಾತ್ರಿ ತನಕ ಬೀದರ್ ನಗರ ಹಾಗೂ ತಾಲ್ಲೂಕಿನ ಹಲವೆಡೆ ಮಳೆ ಬಿದ್ದಿದೆ. ಬಸವಕಲ್ಯಾಣದಲ್ಲಿ ಭಾರಿ ಮಳೆಯಾದರೆ, ಔರಾದ್ ಹಾಗೂ ಭಾಲ್ಕಿ ತಾಲ್ಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ. ಮಂಗಳವಾರ ಸಂಜೆ ಬೀದರ್ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅರ್ಧಗಂಟೆಗೂ ಹೆಚ್ಚು ಸಮಯ ಮಳೆ ಸುರಿದಿದೆ. ಜಿಲ್ಲೆಯ ಹುಲಸೂರ, ಹುಮನಾಬಾದಿನಲ್ಲಿ ಮಳೆಯಾಗಿದೆ.
ಸತತ ಮಳೆಗೆ ಬೀದರ್ ನಗರದ ಹಲವು ತಗ್ಗು ಪ್ರದೇಶಗಳಲ್ಲಿ ಅಪಾರ ನೀರು ಸಂಗ್ರಹಗೊಂಡಿದೆ. ನಗರದ ಜನವಾಡ ರಸ್ತೆಯ ಮೆಟ್ರಿಕ್ ನಂತರದ ಡಾ.ಬಿ.ಆರ್. ಅಂಬೇಡ್ಕರ್ ವಸತಿ ನಿಲಯದ ಆವರಣ ಸಂಪೂರ್ಣ ಜಲಾವೃತವಾಗಿದೆ.
‘ಮಳೆ ನೀರಿನೊಂದಿಗೆ ಹೊಲಸು ಕೂಡ ಹಾಸ್ಟೆಲ್ ಆವರಣದಲ್ಲಿ ನಿಂತಿರುವುದರಿಂದ ದುರ್ಗಂಧಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಕೂಡಲೇ ನೀರು ಹರಿದು ಹೋಗಲು ವ್ಯವಸ್ಥೆ ಮಾಡಬೇಕು’ ಎಂದು ಭಾರತೀಯ ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ಪ್ರದೀಪ್ ನಾಟಿಕರ್ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.