ADVERTISEMENT

ಅತ್ಯಾಚಾರ: ತೆಲಂಗಾಣ ಪೊಲೀಸರಿಂದ ಬೀದರ್‌ನ ಮೂವರ ಬಂಧನ

ಅತ್ಯಾಚಾರ, ವಂಚನೆ ಆರೋಪ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 8:58 IST
Last Updated 13 ಫೆಬ್ರುವರಿ 2020, 8:58 IST

ಬೀದರ್: ಮತ್ತು ಬರುವ ಪಾನೀಯ ಕೊಟ್ಟು ಅತ್ಯಾಚಾರ ಮಾಡಿ ಬ್ಲ್ಯಾಕ್ ಮೇಲ್‌ ಮಾಡಿದ ಆರೋಪದ ಮೇಲೆ ಬೀದರ್‌ನ ವಕೀಲ ಸೇರಿ ಮೂವರನ್ನು ತೆಲಂಗಾಣದ ಪೊಲೀಸರು ಈಚೆಗೆ ಬಂಧಿಸಿದ್ದಾರೆ.

ಗುಂಪಾದ ವಕೀಲ ಸಂಜೀವ್ ರೆಡ್ಡಿ, ಬ್ಯಾಂಕೊಂದರಲ್ಲಿ ಅಧಿಕಾರಿಯಾಗಿರುವ ಅವರ ಪತ್ನಿ ಕವಿತಾ, ಸೋದರಳಿಯ ವಿಶಾಲ್ ರೆಡ್ಡಿ ಅವರನ್ನು ಹೈದರಾಬಾದ್‌ನ ಬಚುಪಲ್ಲಿ ಪೊಲೀಸರು ಬಂಧಿಸಿದ್ದಾರೆ.

ಸಂಜೀವ್ ರೆಡ್ಡಿ ಫೇಸ್‌ಬುಕ್‌ ಮೂಲಕ ಅಮೆರಿಕದಲ್ಲಿ ನೆಲೆಸಿರುವ ಹೈದರಾಬಾದ್‌ ಮೂಲದ ಮಹಿಳೆಯ ಪರಿಚಯ ಮಾಡಿಕೊಂಡಿದ್ದರು. ಎರಡು ವರ್ಷಗಳಿಂದ ಅವಳೊಂದಿಗೆ ಸಲುಗೆಯಿಂದ ಇದ್ದರು. ಹಿಂದೊಮ್ಮೆ ಮಹಿಳೆ ಹೈದರಾಬಾದ್‌ಗೆ ಬಂದಿದ್ದಾಗ ಮೂವರೂ ಊಟಕ್ಕೆಂದು ಹೋಟೆಲ್‌ಗೆ ಕರೆದಿದ್ದರು. ಊಟ ಮಾಡಲು ನಿರಾಕರಿಸಿದಾಗ ತಂಪು ಪಾನೀಯದಲ್ಲಿ ಮತ್ತು ಬರುವ ಮಾತ್ರೆ ಹಾಕಿದ್ದರು. ಸಂಜೀವರೆಡ್ಡಿಅತ್ಯಾಚಾರ ಎಸಗಿದ್ದು, ಉಳಿದ ಇಬ್ಬರು ಮೊಬೈಲ್‌ನಲ್ಲಿ ಚಿತ್ರ ಸೆರೆ ಹಿಡಿದಿದ್ದರು ಎಂದು ಆರೋಪಿಸಲಾಗಿದೆ.

ADVERTISEMENT

‘ನನ್ನ ಚಿತ್ರ ತೋರಿಸಿ ₹ 50 ಲಕ್ಷ ವಸೂಲಿ ಮಾಡಿದ್ದಾರೆ. ಈಗ ಮತ್ತೆ ಹಣಕ್ಕಾಗಿ ಪೀಡಿಸುತ್ತಿದ್ದಾರೆ’ ಎಂದು ಮಹಿಳೆ ತೆಲಂಗಾಣ ಪೊಲೀಸರಿಗೆ ದೂರು ನೀಡಿದ್ದರು. ಫೆ. 7 ರಂದು ತೆಲಂಗಾಣ ಪೊಲೀಸರ ತಂಡ ರೆಡ್ಡಿಯವರ ನಿವಾಸದ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಿದೆ. ದಾಳಿ ವೇಳೆ ದೊರೆತ ಡೈರಿಯಲ್ಲಿ ಮಹಿಳೆಯರ ಅನೇಕ ಮೊಬೈಲ್‌ ಸಂಖ್ಯೆಗಳು ಪತ್ತೆಯಾಗಿವೆ. ಆರೋಪಿಗಳು ಇನ್ನೂ ಕೆಲ ಮಹಿಳೆಯರಿಗೆ ವಂಚಿಸಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.