
ಬಸವಕಲ್ಯಾಣ: ‘ವಸತಿ ಶಾಲೆಗಳ ಶಿಕ್ಷಕರು ತಂದೆ–ತಾಯಿ, ಪೋಷಕರ ಜವಾಬ್ದಾರಿಯೂ ನಿರ್ವಹಿಸಿ ಮಕ್ಕಳ ಹಿತ ಬಯಸಬೇಕಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಗಿರೀಶ ಬದೋಲೆ ಹೇಳಿದರು.
ತಾಲ್ಲೂಕಿನ ನಾರಾಯಣಪುರದ ಜವಾಹರ ನವೋದಯ ವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಸ್ತೆ ನಿರ್ಮಾಣ ಕಾಮಗಾರಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
‘ಇಂಥಲ್ಲಿ ಶಿಕ್ಷಕರು ಎಲ್ಲ ವಿದ್ಯಾರ್ಥಿಗಳನ್ನು ಸಮಾನ ದೃಷ್ಟಿಯಿಂದ ನೋಡಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗೂ ಮಹತ್ವ ನೀಡಬೇಕು. ಇದಲ್ಲದೆ ವಿದ್ಯಾರ್ಥಿಗಳ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ದೂರ ಮಾಡಬೇಕಾದರೆ ಈಗಲೇ ಸತತವಾಗಿ ಪರಿಶ್ರಮಪಡಬೇಕು. ನಿರ್ದಿಷ್ಟ ಗುರಿ ಇಟ್ಟುಕೊಂಡು ಎಂಥ ಕಷ್ಟನಷ್ಟ ಅನುಭವಿಸಿದರೂ ಅದನ್ನು ಸಾಧಿಸಲು ಪ್ರಯತ್ನಿಸಬೇಕು’ ಎಂದರು.
‘ವಿದ್ಯಾಲಯದ ಆವರಣದಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಉತ್ತಮ ರಸ್ತೆ ನಿರ್ಮಾಣಗೊಂಡಿದೆ. ಬೇರೆ ಕಾಮಗಾರಿಯೂ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ಇತರೆ ಸಮಸ್ಯೆಗಳನ್ನೂ ಬಗೆಹರಿಸಲಾಗುವುದು’ ಎಂದು ಹೇಳಿದರು.
ವಿದ್ಯಾಲಯದ ಪ್ರಾಚಾರ್ಯೆ ಶ್ರೀಲತಾ ವಿ.ಮಾತನಾಡಿ,‘ವಿದ್ಯಾಲಯದಲ್ಲಿ ಭೌತಿಕ ಸೌಲಭ್ಯಗಳ ವಿಸ್ತರಣೆ ಮಾಡುವ ಜೊತೆಗೆ ಬೌದ್ಧಿಕ ಪ್ರಗತಿಗೂ ಪ್ರಯತ್ನಿಸಲಾಗುತ್ತಿದೆ. ಮಕ್ಕಳ ಗುರಿ ಸಾಧನೆಗೆ ಶಿಕ್ಷಕರ ಮತ್ತು ಪಾಲಕರ ಸಹಕಾರವೂ ಅಗತ್ಯ’ ಎಂದರು.
ಶಿಕ್ಷಕರಾದ ಬಿ.ಡಿ.ಜಂಬಗಿ, ಮದನ ಲಾಮತೂರೆ, ಧರ್ಮಣ್ಣ ಚಿಟ್ಟಾ ಮಾತನಾಡಿದರು.
ಇಒ ರಮೇಶ ಸುಲ್ಫಿ, ಎಇಇ ಶಿವಕುಮಾರ, ಮಹ್ಮದ್ ಸಲೀಂ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೆಂಕಮ್ಮ ಇಸ್ಲಾಂಪುರೆ, ಉಪಾಧ್ಯಕ್ಷ ಚೇತನ ಕಾಡೆ, ಪಿಡಿಒ ಕವಿತಾ ಶೃಂಗೇರಿ, ಸಂಯೋಜಕ ವೀರಾರೆಡ್ಡಿ ನಾರಾಯಣಪುರ, ಅಶೋಕ ಉಚ್ಛೇಕರ್, ರವಿ ಕೋರಾಳೆ, ಮಾಣಿಕ ಧುಮ್ಮನಸೂರೆ ಹಾಗೂ ರಾಚಯ್ಯ ಸ್ವಾಮಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.