
ಕಮಲನಗರ: ಖತಗಾಂವ-ಮದನೂರ ಗ್ರಾಮಗಳ ನಡುವಿನ ಸಂಪರ್ಕ 2 ಕಿ.ಮೀ. ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ತಗ್ಗು–ಗುಂಡಿಗಳಿಂದ ತುಂಬಿದೆ. ಪ್ರಮುಖ ರಸ್ತೆ ಆಗಿರುವುದರಿಂದ ನೂರಾರು ವಾಹನಗಳು ಸಂಚರಿಸುತ್ತಿದ್ದು, ಗ್ರಾಮಸ್ಥರಿಗೆ ರಸ್ತೆ ಸಂಚಾರ ದುಸ್ತರವಾಗಿದೆ.
ಮದನೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಆಗಿರುವುದರಿಂದ ಈ ಮಾರ್ಗದಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ರೈತರು, ವೈಯಕ್ತಿಕ ಕೆಲಸಗಳಿಗಾಗಿ ತೆರಳುವವರು ಇದೇ ರಸ್ತೆಯಲ್ಲಿ ಸಂಚರಿಸಬೇಕು. ಆದರೆ ರಸ್ತೆಯು ಹಾಳಾಗಿರುವುದರಿಂದ ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುವಂತಾಗಿದೆ. ರಸ್ತೆ ದುರಸ್ತಿಗಾಗಿ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿ. ಹೀಗಾಗಿ ಈ ರಸ್ತೆಯಲ್ಲಿ ಓಡಾಡುವ ಜನರು, ರಸ್ತೆಯ ದುಃಸ್ಥಿತಿ ಕಂಡು ನಿತ್ಯ ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದೆ.
ಮದನೂರ ಗ್ರಾಮದಲ್ಲಿ ಗ್ರಾ.ಪಂ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಗಳು ಇರುವುದರಿಂದ ಖತಗಾಂವ ಗ್ರಾಮದ ನಾಗರಿಕರು ತಮ್ಮ ಕೆಲಸ ಕಾರ್ಯಗಳ ನಿಮಿತ್ತ ಇದೇ ರಸ್ತೆಯಿಂದ ಸಂಚರಿಸುತ್ತಾರೆ. ರಸ್ತೆ ಸಂಪೂರ್ಣ ಹಾಳಾಗಿದ್ದು, ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಇನ್ನಾದರೂ ಸಂಬಂಧಿತ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಈ ರಸ್ತೆ ಅಭಿವೃದ್ಧಿಗೆ ಆದ್ಯತೆ ಕೊಡಲಿ ಎಂಬುದು ಖತಗಾಂವ ಗ್ರಾಮದ ನಾಗರಿಕರು ಒತ್ತಾಯವಾಗಿದೆ.
ಕಲ್ಲು, ಮಣ್ಣು, ಜಲ್ಲಿ ಕಲ್ಲು ಮೇಲೆದ್ದಿವೆ. ಇದೀಗ ಮಳೆಗಾಲದಲ್ಲಿ ಮಳೆ ನೀರು ರಸ್ತೆಯ ಮೇಲೆ ಹರಿಯುತ್ತದೆ. ಹೀಗಾಗಿ ಹದಗೆಟ್ಟ ಕಿರಿದಾದ ರಸ್ತೆಯಲ್ಲಿ ಪ್ರಯಾಣ ಕಷ್ಟಕರವಾಗಿದೆ ಎಂದು ಖತಗಾಂವ ಗ್ರಾಮಸ್ಥರಾದ ಮುಸಾ ಸೈಯ್ಯದ, ಆನಂದ ಪಾಟೀಲ್, ಪುಂಡಲೀಕ ಪಾಟೀಲ ಬೇಸರ ವ್ಯಕ್ತಪಡಿಸಿದರು.
ಖತಗಾಂವದಿಂದ–ಮದನೂರ ರಸ್ತೆ ತೀರಾ ಹದಗೆಟ್ಟಿದ್ದು ರಸ್ತೆಯೂದ್ದಕ್ಕೂ ತಗ್ಗು ಗುಂಡಿಗಳು ಬಿದ್ದಿರುವ ಕಾರಣ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುವ ಪರಿಸ್ಥಿತಿಯಿದೆಆನಂದ ಪಾಟೀಲ ಮದನೂರ ಪಿಕೆಪಿಎಸ್ ಮಾಜಿ ಉಪಾಧ್ಯಕ್ಷ
ಖತಗಾಂವ-ಮದನೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 2 ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿದ್ದು ಸಂಬಂಧಿತ ಅಧಿಕಾರಿಗಳು ಹೊಸ ರಸ್ತೆ ನಿರ್ಮಿಸಲು ಮುಂದಾಗಬೇಕು.ಪ್ರಮೋದ ಧರಣೆ ಖತಗಾಂವ ಗ್ರಾಮಸ್ಥ
ಖತಗಾಂವ-ಮದನೂರ 2 ಕಿ.ಮೀ. ರಸ್ತೆ ಹದಗೆಟ್ಟಿರುವ ಕುರಿತಾಗಿ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಂದ ಕೂಡಲೇ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದುರಾಜಕುಮಾರ ಉದಗೀರೆ ಜೆಇ ಪಂಚಾಯತ್ ರಾಜ್ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.