ಔರಾದ್: ತಾಲ್ಲೂಕಿನ ಭಂಡಾರಕುಮಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಸಿಂಗ್ ನಾಯಕ್ ತಾಂಡಾ ನಿವಾಸಿಗಳಿಗೆ ಕನಿಷ್ಠ ಕಚ್ಚಾ ರಸ್ತೆಯ ಭಾಗ್ಯ ಸಿಕ್ಕಲ್ಲ.
18 ಗುಡಿಸಲು ಇರುವ ಈ ತಾಂಡಾದಲ್ಲಿ ಮಕ್ಕಳು ಸೇರಿದಂತೆ 150 ಜನ ಇದ್ದಾರೆ. ಇವರು ತಮ್ಮ ತಾಂಡಾದಿಂದ ಹೊರ ಬರಲು 1.5 ಕಿ.ಮೀ ನಷ್ಟು ಕಲ್ಲು, ಮಣ್ಣು, ಕೆಸರು, ಹುಲ್ಲು, ಮುಳ್ಳಿನ ಪೊದೆಗಳಂತಹ ದುರ್ಗಮ ದಾರಿಯಿಂದ ಬರಬೇಕಾಗುತ್ತದೆ.
ಮಳೆಯಾದರೆ ಬೈಕ್ ಕೂಡ ಹೋಗುವುದಿಲ್ಲ. ಹೆರಿಗೆ ಮತ್ತಿತರೆ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಮಂಚ ಇಲ್ಲವೇ ಮೈಮೇಲೆ ಹಾಕಿಕೊಂಡು ಹೋಗಬೇಕು. ತಾಂಡಾದಲ್ಲಿ ಶಾಲೆ ಇಲ್ಲದ ಕಾರಣ ಮಳೆ ಬಂದರೆ ಮಕ್ಕಳು ಶಾಲೆಗೆ ಹೋಗಲು ಆಗದು ಎಂದು ತಾಂಡಾ ನಿವಾಸಿಗಳು ಗೋಳು ತೋಡಿಕೊಂಡಿದ್ದಾರೆ.
‘ನಮ್ಮ ತಾಂಡಾ ಮಹಾದೇವ ಪಾಟಿ (ಕ್ರಾಸ್)ನಿಂದ ಒಳಗೆ 1.5 ಕಿ.ಮೀ ಅಂತರ ಇದೆ. ಇಲ್ಲಿ ರಸ್ತೆ ಮಾಡಿದರೆ ಸಮಸ್ಯೆ ಆಗುವುದಿಲ್ಲ. ಕಚ್ಚಾ ರಸ್ತೆಯನ್ನಾದರೂ ಮಾಡಿ ಎಂದು ಗ್ರಾಮ ಪಂಚಾಯಿತಿ ಅವರಿಗೆ ಮನವಿ ಸಲ್ಲಿಸಿದ್ದೇವೆ. ಅವರಿಂದಲೂ ಆಗಿಲ್ಲ. ಶಾಸಕ ಪ್ರಭು ಚವ್ಹಾಣ್ ಅವರಿಗೂ ಹೇಳಿದ್ದೇವೆ. ಅವರಿಂದಲೂ ಆಗಿಲ್ಲ. ಮೊನ್ನೆ ಸುರಿದ ಮಳೆ ನೀರು ನಮ್ಮ ತಾಂಡಾವನ್ನೆಲ್ಲ ಆವರಿಸಿದೆ. ಮಕ್ಕಳು, ಮಹಿಳೆಯರು ಭಯ ಪಡುತ್ತಿದ್ದಾರೆ’ ಎಂದು ನಿವಾಸಿ ಗೋರಖ ರಾಠೋಡ್ ಹೇಳುತ್ತಾರೆ.
ಈ ರಾಮಸಿಂಗ್ ನಾಯಕ್ ತಾಂಡಾಕ್ಕೆ ಈಗಲೂ ರಸ್ತೆ ಇಲ್ಲ. ಫಾರ್ಮೆಷನ್ (ಕಚ್ಚಾ) ರಸ್ತೆ ಮಾಡಲು ಸಾಕಷ್ಟು ಅನುದಾನ ಬೇಕು. ಅಷ್ಟು ಅನುದಾನ ನಮ್ಮಲ್ಲಿ ಇಲ್ಲ. ಆದರೂ ನಡೆದುಕೊಂಡು ಹೋಗಲು ಅನುಕೂಲವಾಗಲು ಮರಮ್ ಹಾಕುವ ವ್ಯವಸ್ಥೆ ಮಾಡುತ್ತೇವೆ ಎನ್ನುತ್ತಾರೆ ಪಿಡಿಒ ಮಹಾದೇವ ಪಾಟೀಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.