ADVERTISEMENT

ಮಸೀದಿ ಮೇಲೆ ಭಗವಾ ಧ್ವಜ: ನಾಲ್ಕು ಯುವಕರ ಬಂಧನ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2023, 0:56 IST
Last Updated 25 ಸೆಪ್ಟೆಂಬರ್ 2023, 0:56 IST
ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಧನ್ನೂರು (ಕೆ) ಗ್ರಾಮದ ಜಾಮಾ ಮಸೀದಿ ಮೇಲೆ ಭಗವಾ ಧ್ವಜ ಹಾರಿಸಲಾಗಿತ್ತು
ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಧನ್ನೂರು (ಕೆ) ಗ್ರಾಮದ ಜಾಮಾ ಮಸೀದಿ ಮೇಲೆ ಭಗವಾ ಧ್ವಜ ಹಾರಿಸಲಾಗಿತ್ತು   

ಬೀದರ್‌: ಬಸವಕಲ್ಯಾಣ ತಾಲ್ಲೂಕಿನ ಧನ್ನೂರಾ (ಕೆ) ಗ್ರಾಮದ ಜಾಮಾ ಮಸೀದಿ ಮೇಲೆ ಭಗವಾ ಧ್ವಜ ಹಾರಿಸಿದ ಆರೋಪದ ಮೇರೆಗೆ ಗ್ರಾಮದ ನಾಲ್ಕು ಜನ ಲಿಂಗಾಯತ ಸಮುದಾಯದ ಯುವಕರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಗ್ರಾಮದ ವೀರೇಶ ಶಿವಕುಮಾರ ಸೂರ್ಯ (20), ಕಲ್ಯಾಣಿ ರಾಜಕುಮಾರ ಸೂರ್ಯ (20), ಸುಶೀಲ ಶಿವಕುಮಾರ ಬಿರಾದಾರ (19) ಹಾಗೂ ಅಭಿಷೇಕ ಚಂದ್ರಕಾಂತ (19) ಬಂಧಿತರು. 

‘ಸೆ. 20ರಂದು ರಾತ್ರಿ ಧನ್ನೂರಾ ಗ್ರಾಮದ ನಾಲ್ಕು ಜನ ಯುವಕರು ಮದ್ಯ ಕುಡಿದು, ಅದೇ ಗ್ರಾಮದ ಹನುಮಾನ್ ದೇವಸ್ಥಾನದ ಮೇಲಿನ ಭಗವಾ ಧ್ವಜ ತೆಗೆದು, ಜಾಮಾ ಮಸೀದಿ ಮೇಲೆ ಕಟ್ಟಿದ್ದಾರೆ. ಮರುದಿನ ಮಸೀದಿಯ ಚಾಂದಸಾಬ್‌ ಸಲೀಂ ಸಾಬ್‌ ಪಠಾಣ ಎಂಬವರು ಕೊಟ್ಟ ದೂರಿನ ಮೇರೆಗೆ ಬಸವಕಲ್ಯಾಣ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಸೆ. 21ರಂದು ಪ್ರಕರಣ ದಾಖಲಿಸಲಾಗಿತ್ತು. ತನಿಖೆ ನಡೆಸಿ, ನಾಲ್ವರನ್ನು ಬಂಧಿಸಲಾಗಿದ್ದು, ಅಶಾಂತಿ ಉಂಟು ಮಾಡುವುದಕ್ಕಾಗಿಯೇ ದುಷ್ಕೃತ್ಯ ಎಸಗಿರುವುದಾಗಿ ನಾಲ್ವರು ತಪ್ಪೊಪ್ಪಿಕೊಂಡಿದ್ದಾರೆ. ಗ್ರಾಮದಲ್ಲಿ ಶಾಂತಿ ಸಭೆ ನಡೆಸಲಾಗಿದ್ದು, ಶಾಂತಿ ಕಾಪಾಡಲು ಗ್ರಾಮಸ್ಥರು ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.