ಜನವಾಡ: ಬೀದರ್ ತಾಲ್ಲೂಕಿನ ಅಲಿಯಂಬರ್ ಗ್ರಾಮದ ಶಂಕರ ಅಣ್ಣೆಪ್ಪ ಅವರಿಗೆ ಜೀತ ಬಿಡುಗಡೆ ಪತ್ರ ಕೊಟ್ಟು ಪುನರ್ವಸತಿ ಕಲ್ಪಿಸಬೇಕು ಎಂದು ಜೀತ ವಿಮುಕ್ತಿ ಕರ್ನಾಟಕ ಸಂಘಟನೆ ಒತ್ತಾಯಿಸಿದೆ.
ಸಂಘಟನೆಯ ಪದಾಧಿಕಾರಿಗಳು ಬೀದರ್ನಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಈ ಕುರಿತು ಮಂಗಳವಾರ ಮನವಿ ಪತ್ರ ಸಲ್ಲಿಸಿದರು.
ಮಗಳ ಮದುವೆಗಾಗಿ ಶಂಕರ ಅವರು ಗ್ರಾಮದ ವಿಶ್ವನಾಥ ಪಾಟೀಲ ಅವರ ಬಳಿ ರೂ. 1 ಲಕ್ಷ ಸಾಲ ಪಡೆದು, ಏಳು ವರ್ಷ ಜೀತ ಮಾಡಿದ್ದರು ಎಂದು ಗಮನ ಸೆಳೆದರು.
ತಹಶೀಲ್ದಾರ್ ವರದಿ ಅನ್ವಯ ಇದು ಜೀತ ಅಲ್ಲ ಎಂದು ಬೀದರ್ ಉಪ ವಿಭಾಗಾಧಿಕಾರಿ 2023 ರ ಅಕ್ಟೋಬರ್ 5 ರಂದು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು. ಪಂಚನಾಮೆ ವೇಳೆ ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳು ವಿಶ್ವನಾಥ ಪಾಟೀಲ ಅವರ ಪುತ್ರ ಬಸವರಾಜ ಪಾಟೀಲ ಅವರ ಪರ ವರದಿ ನೀಡಿದ್ದಾರೆ. ನ್ಯಾಯಾಲಯದ ಆದೇಶದ ಪ್ರಕಾರ ಜನವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಂಘಟನೆಯ ಜಿಲ್ಲಾ ಸಂಚಾಲಕಿ ಇಂದುಮತಿ ಸಾಗರ್, ವೀರ ಕನ್ನಡಿಗರ ಸೇನೆ ರಾಜ್ಯ ಸಂಚಾಲಕ ಸುಬ್ಬಣ್ಣ ಕರಕನಳ್ಳಿ, ಕರ್ನಾಟಕ ಪ್ರಜಾಶಕ್ತಿ ಸಮಿತಿ ಉಪಾಧ್ಯಕ್ಷ ಮಹೇಂದ್ರಕುಮಾರ ಹೊಸಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.