ಬಸವಕಲ್ಯಾಣ: ‘ಇಲ್ಲಿ ಸಂತ ಸೇವಾಲಾಲ್ ಭವನ ನಿರ್ಮಾಣಕ್ಕಾಗಿ 2 ಎಕರೆ ಜಮೀನು ಒದಗಿಸುವುದಕ್ಕಾಗಿ ಪ್ರಯತ್ನಿಸುತ್ತೇನೆ’ ಎಂದು ಶಾಸಕ ಶರಣು ಸಲಗರ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ನಡೆದ ತಾಲ್ಲೂಕು ಮಟ್ಟದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಂಜಾರ ಸಮಾಜ ಹಿಂದುಳಿದಿದ್ದು ಶೈಕ್ಷಣಿಕ ಹಾಗೂ ಇತರೆ ಸೌಲಭ್ಯ ದೊರಕಿಸಿ ಕೊಡುವುದಕ್ಕಾಗಿ ಪ್ರಯತ್ನಿಸುತ್ತೇನೆ. ಎಲ್ಲರೂ ಸೇವಾಲಾಲ್ ಅವರ ತತ್ವದ ಪಾಲನೆ ಮಾಡಬೇಕು. ಈ ಸಮಾಜದವರಾದ ಜಿಲ್ಲೆಯ ಸಚಿವ ಪ್ರಭು ಚವಾಣ ಹಾಗೂ ಕಲಬುರಗಿ ಸಂಸದ ಡಾ.ಉಮೇಶ ಜಾಧವ ಅವರು ಸಮಾಜದ ಏಳ್ಗೆಗಾಗಿ ಸತತವಾಗಿ ಪ್ರಯತ್ನಿಸುತ್ತಿದ್ದಾರೆ’ ಎಂದರು.
ವಿಧಾನಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಮಾತನಾಡಿ, ‘ಬಂಜಾರಾ ಸಮಾಜ ರಾಜಪೂತ ಸಮುದಾಯದಂತೆ ಕ್ಷತ್ರಿಯ ಸಮುದಾಯವಾಗಿದೆ. ಇದರ ವಿಕಾಸಕ್ಕಾಗಿ ಎಲ್ಲರೂ ಒಗ್ಗಟ್ಟಾಗಿಯೇ ಶ್ರಮಿಸೋಣ’ ಎಂದರು.
ಮುಖಂಡ ಬಾಬು ಹೊನ್ನಾನಾಯಕ್ ಮಾತನಾಡಿದರು.
ಕಾಂಗ್ರೆಸ್ ಅಧ್ಯಕ್ಷ ನೀಲಕಂಠ ರಾಠೋಡ ಮಾತನಾಡಿ, ಸಮಾಜದ ಹಿತಕ್ಕಾಗಿ ಬಂಜಾರಾ ಅಭಿವೃದ್ಧಿ ನಿಗಮ ಇದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅನಿಲ ಮಹಾರಾಜ, ಲೋಕೇಶ ಮಹಾರಾಜ, ಸಿದ್ರಾಮೇಶ್ವರ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಣ್ಣಾರಾವ್ ರಾಠೋಡ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮಾತನಾಡಿದರು. ಜೆಡಿಎಸ್ ಮುಖಂಡ ಯಶ್ರಬಅಲಿ ಖಾದ್ರಿ, ಧನಸಿಂಗ್ ರಾಠೋಡ, ಗೋಪಾಲ ನಾಯಕ, ಶಾಂತಕುಮಾರ ರಾಠೋಡ, ಸಂತೋಷ ಚವಾಣ, ಆನಂದ ಹೊನ್ನಾನಾಯಕ, ಬಳಿರಾಮ ಚವಾಣ, ಸಂತೋಷ ಹೊನ್ನಾನಾಯಕ, ಶಿವರಾಮ ಚವಾಣ, ಬಳಿರಾಮ ಜಾಧವ, ದಿನೇಶ ರಾಠೋಡ, ಜಗನ್ನಾಥ ತಾರೆ, ರಾಜಕುಮಾರ ರಾಠೋಡ, ನವನಾಥ ರಾಠೋಡ, ಜೈರಾಜ ರಾಠೋಡ, ಚಂದ್ರಕಾಂತ ರಾಠೋಡ, ಸಂಜೀವಕುಮಾರ ನಾಯಕ ಪಾಲ್ಗೊಂಡಿದ್ದರು. ಎಂಬಿಬಿಎಸ್ ಹಾಗೂ ಎಸ್ಸೆಸ್ಸೆಲ್ಸಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.