ADVERTISEMENT

ನಾಳೆಯಿಂದ ಶರಣ ಸಂಸ್ಕೃತಿ ಉತ್ಸವ

ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 9:07 IST
Last Updated 19 ಡಿಸೆಂಬರ್ 2019, 9:07 IST
ಗುರುನಾಥ ಕೊಳ್ಳೂರಶರಣ ಸಂಸ್ಕೃತಿ ಉತ್ಸವ ಸ್ವಾಗತ ಸಮಿತಿ ಅಧ್ಯಕ್ಷ 
ಗುರುನಾಥ ಕೊಳ್ಳೂರಶರಣ ಸಂಸ್ಕೃತಿ ಉತ್ಸವ ಸ್ವಾಗತ ಸಮಿತಿ ಅಧ್ಯಕ್ಷ    

ಬೀದರ್: ಜಿಲ್ಲಾ ಬಸವ ಕೇಂದ್ರದ ವತಿಯಿಂದ ನಗರದ ಬಿ.ವಿ.ಬಿ. ಕಾಲೇಜು ಆವರಣದಲ್ಲಿ ಡಿಸೆಂಬರ್‌ 20 ರಿಂದ 22 ರ ವರೆಗೆ ಸಹಜ ಶಿವಯೋಗ ಹಾಗೂ ಶರಣ ಸಂಸ್ಕೃತಿ ಉತ್ಸವ ಆಯೋಜಿಸಲಾಗಿದೆ ಎಂದು ಶರಣ ಸಂಸ್ಕೃತಿ ಉತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷ ಗುರುನಾಥ ಕೊಳ್ಳೂರ ಹೇಳಿದರು.

ಮೂರು ದಿನಗಳ ಕಾಲ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಸಾನಿಧ್ಯದಲ್ಲಿ ಸಹಜ ಶಿವಯೋಗ, ಯುವ ಚಿಂತನೆ, ಸಂಸ್ಕೃತಿ ಚಿಂತನೆ, ಕೃಷಿ ಚಿಂತನೆ ಗೋಷ್ಠಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಡಿಸೆಂಬರ್‌ 20 ರಂದು ಬೆಳಿಗ್ಗೆ 7.15ಕ್ಕೆ ಸಹಜ ಶಿವಯೋಗ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ಜರುಗಲಿರುವ ಯುವ ಚಿಂತನೆ ಗೋಷ್ಠಿಯನ್ನು ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಉದ್ಘಾಟಿಸುವರು. ಅಕ್ಕ ಅನ್ನಪೂರ್ಣ ಸಮ್ಮುಖ ವಹಿಸುವರು. ಭಾಲ್ಕಿಯ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸುವರು. ಚಿಂತಕ ಸಿದ್ದು ಯಾಪಲಪರವಿ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಡಾ. ಬಸವರಾಜ ಪಾಟೀಲ ಅಷ್ಟೂರ, ಚನ್ನಬಸಪ್ಪ ಹಾಲಹಳ್ಳಿ, ಅಬ್ದುಲ್ ಖದೀರ್, ಪೂರ್ಣಿಮಾ ಜಿ., ವೈಜಿನಾಥ ಕಮಠಾಣೆ, ಮಹಮ್ಮದ್‌ ಗುಲ್ಶಿನ್‌, ಜಯದೇವಿ ಯದಲಾಪೂರೆ, ರಮೇಶ ಕುಲಕರ್ಣಿ ಭಾಗವಹಿಸುವರು ಎಂದು ತಿಳಿಸಿದರು.

ADVERTISEMENT

ಸಂಜೆ 6ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ವೈ.ರಾಘವೇಂದ್ರ ಶರಣ ಸಂಸ್ಕೃತಿ ಉತ್ಸವವನ್ನು ಉದ್ಘಾಟಿಸುವರು. ನಿಜಗುಣಾನಂದ ಸ್ವಾಮೀಜಿ ಸಮ್ಮುಖ ವಹಿಸುವರು. ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ನೇತೃತ್ವ ವಹಿಸುವರು. ಉತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷ ಗುರುನಾಥ ಕೊಳ್ಳೂರ ಅಧ್ಯಕ್ಷತೆ ವಹಿಸುವರು. ಸಾಹಿತಿ ಮಹೇಶ ಚಟ್ನಳ್ಳಿ ಅನುಭಾವ ಮಂಡಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌, ಮುಖಂಡರಾದ ಶೈಲೇಂದ್ರ ಬೆಲ್ದಾಳೆ, ಸೂರ್ಯಕಾಂತ ನಾಗಮಾರಪಳ್ಳಿ, ರಾಜಕುಮಾರ ಪಾಟೀಲ ತೆಲ್ಕೂರ್, ಬಾಬು ವಾಲಿ, ಚಂದ್ರಶೇಖರ ಪಾಟೀಲ, ಧನರಾಜ ತಾಳಂಪಳ್ಳಿ, ಕುಶಾಲ ಪಾಟೀಲ ಗಾದಗಿ, ಡಿ.ಕೆ.ಸಿದ್ರಾಮ, ಅನಿಲಕುಮಾರ ಪನ್ನಾಳೆ ಪಾಲ್ಗೊಳ್ಳುವರು.

21 ರಂದು ಬೆಳಿಗ್ಗೆ 7.30ಕ್ಕೆ ಸಹಜ ಶಿವಯೋಗ ನಡೆಯಲಿದೆ.

ಬೆಳಿಗ್ಗೆ 10.30ಕ್ಕೆ ನಡೆಯುವ ಸಂಸ್ಕೃತಿ ಚಿಂತನೆ ಗೋಷ್ಠಿಯನ್ನು ಮಾಜಿ ಸಚಿವ ಎಂ.ಬಿ.ಪಾಟೀಲ ಉದ್ಘಾಟಿಸುವರು. ನಿಜಗುಣಾನಂದ ಸ್ವಾಮೀಜಿ ನೇತೃತ್ವ ವಹಿಸುವರು. ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಿಠಾರೆ ಅಧ್ಯಕ್ಷತೆ ವಹಿಸುವರು. ಚಿಂತಕಿ ಲೀಲಾ ಕಾರಟಗಿ ಅನುಭಾವ ಮಂಡಿಸುವರು.

ಸಂಜೆ 6 ಕ್ಕೆ ನಡೆಯಲಿರುವ ಕೃಷಿ ಚಿಂತನೆ ಗೋಷ್ಠಿಯನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಉದ್ಘಾಟಿಸುವರು.

ಶಿವಯೋಗೀಶ್ವರ ಸ್ವಾಮಿ ನೇತೃತ್ವ ವಹಿಸುವರು. ಗಂಗಾಂಬಿಕೆ ಅಕ್ಕ ಸಮ್ಮುಖ ವಹಿಸುವರು. ಕುಶಾಲ ಪಾಟೀಲ ಗಾದಗಿ ಅಧ್ಯಕ್ಷತೆ ವಹಿಸುವರು. ಪ್ರಗತಿ ಪರ ರೈತ ಮಹಿಳೆ ಕವಿತಾ ಮಿಶ್ರಾ ಅನುಭಾವ ಮಂಡಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ, ರಹೀಂ ಖಾನ್‌, ನೀರಾವರಿ ಇಲಾಖೆಯ ಮೃತ್ಯುಂಜಯ ಸ್ವಾಮಿ, ಮುಖಂಡರಾದ ಉಮಾಕಾಂತ ನಾಗಮಾರಪಳ್ಳಿ, ದಿಲೀಪ ತಾಳಂಪಳ್ಳಿ, ಬಸವರಾಜ ಜಾಬಶೆಟ್ಟಿ, ರಮೇಶ ಪಾಟೀಲ ಸೋಲಪೂರ, ಶಾಲಿನಿ ಚಿಂತಾಮಣಿ, ಗುರಮ್ಮ ಸಿದ್ದಾರೆಡ್ಡಿ, ವಿಜಯಕುಮಾರ ಪಾಟೀಲ ಪಾಲ್ಗೊಳ್ಳುವರು.

22 ರಂದು ಬೆಳಿಗ್ಗೆ 7.30ಕ್ಕೆ ಸಹಜ ಶಿವಯೋಗ ಜರುಗಲಿದೆ ಸಂಜೆ 6ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ನಿಜಗುಣಾನಂದ ಸ್ವಾಮೀಜಿ ನೇತೃತ್ವ ವಹಿಸುವರು. ಇಳಕಲ್‌ನ ಗುರು ಮಹಾಂತ ಸ್ವಾಮಿ, ಸಿದ್ದರಾಮ ಬೆಲ್ದಾಳ ಶರಣರು ಸಮ್ಮುಖ ವಹಿಸುವರು. ಮುಖ್ಯ ಅತಿಥಿಗಳಾಗಿ ವಸತಿ ಸಚಿವ ವಿ.ಸೋಮಣ್ಣ, ಉತ್ಸವದ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಧನರಾಜ ತಾಳಂಪಳ್ಳಿ, ಸಂಸದ ಭಗವಂತ ಖೂಬಾ, ಶಾಸಕರಾದ ಬಂಡೆಪ್ಪ ಕಾಶೆಂಪೂರ, ರಘುನಾಥರಾವ್ ಮಲ್ಕಾಪೂರೆ, ಮಾಜಿ ಶಾಸಕ ಸುಭಾಷ ಕಲ್ಲೂರ ಪಾಲ್ಗೊಳ್ಳುವರು.

ಕುಶಾಲ ಪಾಟೀಲ ಗಾದಗಿ, ಪ್ರಭುರಾವ್‌ ವಸ್ಮತೆ, ರಾಜಕುಮಾರ ಚಿಲ್ಲರ್ಗಿ, ಸುರೇಶ ಚೆನಶೆಟ್ಟಿ, ಬಾಬು ವಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.