ನಾವು ಅನೇಕ ಹಬ್ಬಗಳನ್ನು ಆಚರಿಸುತ್ತೇವೆ. ಹಬ್ಬಗಳ ಉದ್ದೇಶ ಬದುಕಿನ ಜಂಜಡದಿಂದ ದೂರವಾಗಿ ಸಡಗರ ಸಂಭ್ರಮದಿಂದ ಉತ್ಸಾಹಭರಿತವಾಗಿ ಇರುವುದೇ ಆಗಿದೆ. ಅಂತರಂಗದಲ್ಲಿ ದೇವಪ್ರಜ್ಞೆ ಸದಾ ಜಾಗ್ರತವಾಗಿರುವುದೇ ಹಬ್ಬಗಳ ಮುಖ್ಯ ಉದ್ದೇಶವಾಗಿದೆ.
ಶಿವರಾತ್ರಿ ಹಬ್ಬ ಭಾರತದ ಮೂಲೆ ಮೂಲೆಯಲ್ಲಿಯೂ ಆಚರಿಸುತ್ತಾರೆ. `ಶಿವ’ ಎಂದರೆ ಮಂಗಲ, ಶುಭ, ಬೆಳಕು, ಕಲ್ಯಾಣಕರ, ಪವಿತ್ರ, ಸಂತೋಷ ಹೀಗೆ ನಾನಾ ಅರ್ಥಗಳಿವೆ. ನಮ್ಮ ಜೀವನ ಸದಾ ಮಂಗಳವಾಗಿರಬೇಕು. ಶಿವಪ್ರಜ್ಞೆಯಿಂದ ಬೆಳಕಾಗಬೇಕು. ಸದಾ ಶಿವನೆನಹುನಿಂದ ಕೂಡಿರಬೇಕು. ಶರಣರ ದೃಷ್ಟಿಯಲ್ಲಿ ನಿತ್ಯವು ಶಿವರಾತ್ರಿಯೇ.
ನಮ್ಮ ಜೀವನ ಶಿವಜೀವನಾಗಬೇಕು. ಅರಿವಿನ ಪ್ರಜ್ಞೆಯು ಅಂತರಂಗದಲ್ಲಿ ಜಾಗ್ರತವಾಗಿರಬೇಕು. ಪವಿತ್ರ ಬದುಕಿನ ಸಂಕಲ್ಪ ಮಾಡಬೇಕು. ಸದಾ ಅಂತರಂಗದ ತುಂಬಾ ಶಿವ ಬೆಳಕು ತುಂಬಿಕೊಂಡಿರಬೇಕು ಎಂಬುದೇ ಶಿವರಾತ್ರಿಯ ಮುಖ್ಯ ಉದ್ದೇಶ.
ಶ್ರೀಮಂತರ ಮನೆಯಲ್ಲಿ ಕೆಲಸ ಮಾಡುವ ಬಡತಾಯಿ ಶ್ರೀಮಂತರ ಮಕ್ಕಳಿಗೆ ಬಾ ಮಗು, ಉಣ್ಣು ಮಗು, ಸ್ನಾನಮಾಡು ಮಗು ಹೀಗೆ ಮಗಾ ಮಗಾ ಎಂದೇ ಕರೆಯುತ್ತಾಳೆ. ಆದರೆ ಆಕೆಯ ಅಂತರಂಗದಲ್ಲಿ ಮಾತ್ರ ನನ್ನ ಮಗು ನನ್ನ ಗುಡಿಸಲ್ಲಿ ಇದೆ ಎಂದು ಆಕೆಯ ಮನದಲ್ಲಿ ಇರುತ್ತದೆ. ಅದೇ ರೀತಿ ನಮ್ಮ ನಿತ್ಯ ಬದುಕಿನಲ್ಲಿ ಯಾವುದೇ ಕಾರ್ಯ ಮಾಡಿದರೂ ಏನೇ ಮಾಡಿದರೂ ನಮ್ಮ ಅಂತರಂಗದಲ್ಲಿ ಶಿವಪ್ರಜ್ಞೆ ಜಾಗ್ರತವಾಗಿರುವುದೇ ನಿಜವಾದ ಶಿವರಾತ್ರಿ. ಉಪವಾಸ ಎಂದರೆ ಕೇವಲ ಉಣ್ಣದಿರುವುದಿಲ್ಲ. ಉಪ ಎಂದರೆ ಹತ್ತಿರ ವಾಸ ಎಂದರೆ ಇರುವುದು ಅಂದರೆ ಯಾವಾಗಲೂ ಶಿವನ ಸನ್ನಿಧಾನದಲ್ಲಿರುವುದೇ ನಿಜವಾದ ಉಪವಾಸ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.