ಬೀದರ್: ಶ್ರಾವಣ ಮಾಸದ ಕೊನೆಯ ಸೋಮವಾರ ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.
ಅದರಲ್ಲೂ ನಗರದ ಪಾಪನಾಶ ಶಿವಲಿಂಗ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದು ಬಂತು. ಬೆಳಿಗ್ಗೆ ಶಿವಲಿಂಗಕ್ಕೆ ಅಭಿಷೇಕ ಮಾಡಿ, ಹೂಗಳಿಂದ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ನೈವೇದ್ಯ ಸಮರ್ಪಿಸಲಾಯಿತು. ಆನಂತರ ವಿವಿಧ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು.
ತಾಲ್ಲೂಕಿನ ಹೊನ್ನಿಕೇರಿ ದೇವಸ್ಥಾನದಿಂದ ಪಾಪನಾಶದ ವರೆಗೆ ಶ್ರಾವಣದ ಕೊನೆಯ ಸೋಮವಾರವೂ ಅನೇಕ ಭಕ್ತರು ಕಾವಡ ಯಾತ್ರೆ ನಡೆಸಿ, ಹರಕೆ ತೀರಿಸಿದರು. ಮಹಿಳೆಯರು ಬರಿಗಾಲಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದರು. ಹೊನ್ನಿಕೇರಿಯಿಂದ ತಂದ ಪವಿತ್ರ ಜಲದಿಂದ ಶಿವಲಿಂಗದ ಅಭಿಷೇಕ ಮಾಡಿ, ಪೂಜೆ ನೆರವೇರಿಸಿದರು.
ಜಿಟಿಜಿಟಿ ಮಳೆಯನ್ನೂ ಲೆಕ್ಕಿಸದೇ ಜನ ದೇಗುಲಕ್ಕೆ ಭೇಟಿ ಕೊಟ್ಟರು. ಮಕ್ಕಳಿಗೆ ಆಟಿಕೆಗಳನ್ನು ಖರೀದಿಸಿ, ಕೆಲಕಾಲ ಕಳೆದು ತೆರಳಿದರು. ದಿನವಿಡೀ ದೇವಸ್ಥಾನದ ಪರಿಸರದಲ್ಲಿ ಜನಜಾತ್ರೆ ಇತ್ತು. ನಗರದ ನರಸಿಂಹ ಝರಣಿ ದೇವಸ್ಥಾನ, ವಿವಿಧ ಹನುಮಾನ ದೇವಸ್ಥಾನಗಳಿಗೂ ಜನ ಭೇಟಿ ಕೊಟ್ಟು ದೇವರ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.