ADVERTISEMENT

ಮಹಿಳೆಯರ ಒಳಗೊಳ್ಳುವಿಕೆಯಿಂದ ಸುಸ್ಥಿರ ಸಮಾಜ: ಪ್ರೊ. ಬಿ.ಕೆ.ತುಳಸಿಮಾಲಾ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2024, 15:27 IST
Last Updated 16 ಮಾರ್ಚ್ 2024, 15:27 IST
ಬೀದರ್‌ನ ಕರ್ನಾಟಕ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ.ತುಳಸಿಮಾಲಾ ಮಾತನಾಡಿದರು
ಬೀದರ್‌ನ ಕರ್ನಾಟಕ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ.ತುಳಸಿಮಾಲಾ ಮಾತನಾಡಿದರು   

ಬೀದರ್‌: ಮಹಿಳೆಯರ ಒಳಗೊಳ್ಳುವಿಕೆಯಿಂದ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ’ ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ.ತುಳಸಿಮಾಲಾ ಅಭಿಪ್ರಾಯ ಪಟ್ಟರು.

ನಗರದ ಕರ್ನಾಟಕ ಕಾಲೇಜಿನ ಮಹಿಳಾ ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮನ್ನು ಸಬಲರಾಗಿಸಲು ಯಾರಾದರೂ ಬರುತ್ತಾರೆ ಎಂದು ಮಹಿಳೆಯರು ಕಾಯಬಾರದು. ಕುಟುಂಬ, ಮಕ್ಕಳು, ಪತಿ ಹೀಗೆ ಎಲ್ಲವನ್ನೂ ಸರಿದೂಗಿಸಿಕೊಂಡು ಮತ್ತೆ ಹೊರಗೆ ಬಂದು ದುಡಿಯುವ ಮಹಿಳೆ ಅಸಾಮಾನ್ಯ ಶಕ್ತಿವುಳ್ಳವಳು ಎಂದು ಹೇಳಿದರು.

ಸರ್ಕಾರ ಕೂಡಾ ಮಹಿಳೆಯರು ಹೆಚ್ಚಾಗಿರುವ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕು. ಮಹಿಳೆಯರ ಒಳಗೊಳ್ಳುವಿಕೆಯಿಂದ ಸುಸ್ಥಿರ ಸಮಾಜ ಮತ್ತು ಸದೃಢವಾದ ದೇಶ ನಿರ್ಮಾಣ ಮಾಡಬಹುದು. ಮಹಿಳೆ ಒಂದು ವೇಳೆ ಈ ಸಮಾಜದಿಂದ ಬೇರ್ಪಟ್ಟರೆ ಆಕೆಯನ್ನು ಸೇರಿಸಿಕೊಂಡು ಸೂಕ್ತ ಪ್ರೋತ್ಸಾಹ, ಧೈರ್ಯ ತುಂಬಿದರೆ ಏನನ್ನಾದರೂ ಸಾಧಿಸಬಹುದು ಎಂದು ತಿಳಿಸಿದರು.

ADVERTISEMENT

ಕಾಲೇಜಿನ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮಾತನಾಡಿ, ಮಹಿಳೆ ಇಂದು ಎಲ್ಲಾ ರಂಗಗಳಲ್ಲಿ  ತನ್ನದೇ ಆದ ಛಾಪು ಮೂಡಿಸಿದ್ದಾಳೆ. ಪುರುಷರಿಗಿಂತ ಹೆಚ್ಚು ಮೇಲುಗೈ ಸಾಧಿಸುತ್ತಿದ್ದಾಳೆ. ಅನೇಕ ಉನ್ನತ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತದ್ದಾಳೆ. ಸುಸಂಸ್ಕೃತ ಮಹಿಳೆ ತನ್ನ ಕುಟುಂಬವನ್ನು ಮತ್ತು ದೇಶವನ್ನು ಸ್ಥಿರವಾಗಿ ಮುನ್ನಡೆಸಿಕೊಂಡು ಹೋಗುತ್ತಾಳೆ ಎಂದು ತಿಳಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಬಿ.ಜಿ.ಮೂಲಿಮನಿ ಮಾತನಾಡಿ, ಮಹಿಳೆ ಎಂದರೆ ದೇವತಾ ಸ್ವರೂಪಿ. ತಾನೂ ಸಂಸ್ಕಾರದಿಂದ ಬದುಕುವುದರ ಜೊತೆಗೆ ತನ್ನ ಕುಟುಂಬವನ್ನು ಸಂಸ್ಕಾರದಿಂದ ಮುನ್ನಡೆಸುತ್ತಾಳೆ. ಮಹಿಳೆ ಶ್ರಮಜೀವಿ, ಪ್ರಯತ್ನಶೀಲಳು ಎಂದರು.

ಕಾಲೇಜಿನ ಕಾರ್ಯದರ್ಶಿ ಸಿದ್ರಾಮ ಪಾರಾ, ನಿರ್ದೇಶಕ ರವಿ ಹಾಲಹಳ್ಳಿ, ಕಾಲೇಜಿನ ಪ್ರಾಚಾರ್ಯ ಮಲ್ಲಿಕಾರ್ಜುನ ಹಂಗರಗಿ, ಐಕ್ಯೂಎಸಿ ಸಂಯೋಜಕ ರಾಜಮೋಹನ, ಉಪ ಪ್ರಾಚಾರ್ಯ ಅನಿಲಕುಮಾರ ಚಿಕ್ಕಮಾಣೂರ, ಪ್ರಾಧ್ಯಾಪಕರಾದ ಸಾಧನಾ ಚಿಮಕೋಡೆ, ಶ್ರುತಿ ಸ್ವಾಮಿ, ಗೀತಾ ರಾಗಾ, ಕಾಲೇಜಿನ ಮಹಿಳಾ ಘಟಕದ ಸಂಯೋಜಕಿ ಶ್ವೇತಾ ಪಾಟೀಲ, ರೇಣುಕಾ ಭಗವತಿ ಹಾಜರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಹಾಗೂ ಪ್ರಾಧ್ಯಾಪಕರಿಗೆ ಬಹುಮಾನ, ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.